ಬೆಂಗಳೂರು: ಇಬ್ಬರು ಸೂಪರಿಂಟೆಂಡಿಂಗ್ ಎಂಜಿನಿಯರ್ ಗಳನ್ನು ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಬಡ್ತಿ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಈ ಅಧಿಕಾರಿಗಳು ಕಾರ್ಯಪಾಲಕ ಎಂಜಿನಿಯರ್ ವೃಂದದ ಅಧಿಕಾರಿಗಳು ಎಂಬ ಕಾರಣ ನೀಡಿ ಮೂರೇ ತಿಂಗಳಲ್ಲಿ ಬಡ್ತಿ ವಾಪಸ್ ಪಡೆದಿದೆ.
ಸೋಮಸುಂದರ್ ಬಿ. ಹಾಗೂ ಮಂಜುನಾಥ್ ಡಿ. ಸೇರಿದಂತೆ 30 ಸೂಪರಿಂಟೆಂಡಿಂಗ್ ಎಂಜಿನಿಯರ್
ಗಳಿಗೆ ನಿಯಮ 32ರಡಿ ಬಡ್ತಿ ನೀಡಿ ಸ್ವತಂತ್ರ ಪ್ರಭಾರದಲ್ಲಿರಬಹುದು ಎಂದು ಇಲಾಖಾ ಪದೋನ್ನತಿ ಸಮಿತಿ ಈ ವರ್ಷದ ಆಗಸ್ಟ್ 23ರಂದು ಶಿಫಾರಸು ಮಾಡಿತು. ಸ್ವತಂತ್ರ ಪ್ರಭಾರದಡಿ 17 ಸೂಪರಿಂಟೆಂಡಿಂಗ್ ಎಂಜಿನಿಯರ್ಗಳಿಗೆ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಬಡ್ತಿ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೆಪ್ಟೆಂಬರ್ 18ರಂದು ಆದೇಶ ಹೊರಡಿಸಿತು. ಸೋಮಸುಂದರ್ ಅವರನ್ನು ಹೇಮಾವತಿ ಯೋಜನಾ ವಲಯದ ಮುಖ್ಯ ಎಂಜಿನಿಯರ್, ಡಿ.ಮಂಜುನಾಥ್ ಅವರನ್ನು ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ (ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ) ಆಗಿ ನೇಮಕ ಮಾಡಲಾಯಿತು.
‘ಸೂಪರಿಂಟೆಂಡಿಂಗ್ ಎಂಜಿನಿಯರ್ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯಲ್ಲಿ ಇವರನ್ನು ಸ್ವತಂತ್ರ ಪ್ರಭಾರದಲ್ಲಿರಿಸಿದ ದಿನಾಂಕವನ್ನೇ ಮುಂಬಡ್ತಿ ನೀಡಿದ ದಿನಾಂಕವೆಂದು ನಮೂದಿಸಿದ್ದರಿಂದ ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲಾಯಿತು. ಆದರೆ, ಇವರಿಬ್ಬರೂ ಕಾರ್ಯಪಾಲಕ ಎಂಜಿನಿಯರ್ ವೃಂದದ ಅಧಿಕಾರಿಗಳು. ಇವರನ್ನು ಸ್ವತಂತ್ರ ಪ್ರಭಾರ
ದಲ್ಲಿರಿಸಲು ಅವಕಾಶ ಇಲ್ಲ’ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.