ಬೆಂಗಳೂರು: ಕನ್ನಡೇತರರಿಗೆ ಕನ್ನಡ ಕಲಿಸುವ ‘ಮನೆ ಮನಗಳಲ್ಲಿ ಕನ್ನಡ ರಂಗವಲ್ಲಿಯ ದರ್ಪಣ–ಮಕರಂದ’ ಅಭಿಯಾನದ ಮೊದಲ ಆವೃತ್ತಿಗೆ ಸಂಬಂಧಿಸಿದಂತೆ ‘ನನಗೆ ಕನ್ನಡ ಗೊತ್ತು’ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಕೆ.ಆರ್.ಪುರದ ‘ಸೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಬೆಂಗಳೂರಿನ ಅಪಾರ್ಟ್ಮೆಂಟ್ನ 450 ಅನ್ಯಭಾಷಿಕ ನಿವಾಸಿಗಳು ನಾಲ್ಕು ತಿಂಗಳಲ್ಲಿ ಕನ್ನಡ ಕಲಿತಿದ್ದು, ಪ್ರಮಾಣಪತ್ರ ಸ್ವೀಕರಿಸಿದರು.
ಗಡಿನಾಡಿನಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದ ಕವಿ, ದಿವಂಗತ ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮದಿನದ ಪ್ರಯುಕ್ತ ಅವರ ಭಾವಗೀತೆಗಳನ್ನು ಹಾಡಲಾಯಿತು.
ಕಿಞ್ಞಣ್ಣ ರೈ ಅವರ ಪುತ್ರ ಡಾ. ಪ್ರಸನ್ನ ರೈ ಮಾತನಾಡಿ, ‘ಯಾವುದೇ ಭಾಷೆ ದೊಡ್ಡದು ಅಥವಾ ಚಿಕ್ಕದು ಅಲ್ಲ. ಮಕರಂದ ಸಂಸ್ಥೆಯ ಪರಿಕಲ್ಪನೆಯಂತೆ ಕರ್ನಾಟಕದಲ್ಲಿ ಅನ್ಯಭಾಷಿಕರು ಕನ್ನಡ ಕಲಿಯಬೇಕು. ಇದೇ ರೀತಿ ಎಲ್ಲ ರಾಜ್ಯಗಳಲ್ಲಿಯೂ ಅಲ್ಲಿನ ಪ್ರಾದೇಶಿಕ ಭಾಷೆಯನ್ನು, ಅಲ್ಲಿ ವಾಸ ಮಾಡುವವರು ಕಲಿಯುವಂತಾಗಬೇಕು’ ಎಂದು ಹೇಳಿದರು.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಅಧ್ಯಕ್ಷ ವಿಕ್ರಮ ರೈ ಮಾತನಾಡಿ, ‘ಸ್ಥಳೀಯ ಭಾಷೆಯನ್ನು ಕಲಿಯುವುದರಿಂದ ಸ್ನೇಹ ಸಂಪಾದನೆಯಾಗುತ್ತದೆ. ವ್ಯವಹಾರವೂ ಸುಲಭ. ಕನ್ನಡವನ್ನು ಕಲಿಯಬೇಕು. ಬೇರೆ ಭಾಷೆಗಳನ್ನೂ ಗೌರವಿಸಬೇಕು’ ಎಂದು ತಿಳಿಸಿದರು.
ಸೀ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ‘ಬೇರೆ ರಾಜ್ಯಗಳಿಂದ ಬಂದವರೊಂದಿಗೆ ಸಂಘರ್ಷಕ್ಕೆ ಎಡೆ ಇಲ್ಲದಂತೆ ಪ್ರೀತಿಯಿಂದ ಭಾಷೆ ಕಲಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.