ಡಿಎಸ್ಎಸ್
ಬೆಂಗಳೂರು: ‘ದಲಿತ’ ಪದದ ಕುರಿತು ಬಹಳ ದಿನಗಳಿಂದ ವಿವಾದ ಸೃಷ್ಟಿಸಲಾಗುತ್ತಿದೆ. ಲೇಖಕಿ ಬಿ.ಟಿ. ಲಲಿತಾ ನಾಯಕ್ ಅವರೂ ಅಸಂಬದ್ಧ ಅರ್ಥವನ್ನು ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ವಿ. ನಾಗರಾಜ್, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ ಈ ಬಗ್ಗೆ ಹೇಳಿಕೆ ನೀಡಿದ್ದು, ‘ದಲಿತ’ ಪದಕ್ಕೆ ಲಲಿತಾ ನಾಯಕ್ ನೀಡಿರುವ ಅರ್ಥವು ಕನ್ನಡ, ಇಂಗ್ಲಿಷ್ ನಿಘಂಟುಗಳಲ್ಲಿ ಇಲ್ಲ’ ಎಂದು ತಿಳಿಸಿದ್ದಾರೆ.
‘ದಲಿತ’ ಪದವನ್ನು ಬಳಸಬಾರದು ಎಂದು ಬಿಜೆಪಿ ಸರ್ಕಾರ ಈ ಹಿಂದೆ ಆದೇಶ ಮಾಡಿತ್ತು. ಈಗ ಲಲಿತಾ ನಾಯಕ್ ಅವರು ಬೇಜವಾಬ್ದಾರಿ ವ್ಯಾಖ್ಯಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
‘ಇತಿಹಾಸದಲ್ಲಿ ದಲಿತ ಪದವನ್ನು ಮೊದಲಿಗೆ ಬಳಕೆಗೆ ತಂದವರು ಅಬ್ರಾಹ್ಮಣ ಚಳವಳಿಯ ನೇತಾರ ಜ್ಯೋತಿಬಾ ಫುಲೆ ಅವರು. ದಲಿತ ಎಂಬ ಮರಾಠಿ ಪದವನ್ನು ‘ದಮನಿತರು’ ‘ತುಳಿತಕ್ಕೊಳಗಾದವರು’, ‘ಛಿದ್ರಗೊಂಡ ಜನರು’ ಎಂಬ ಅರ್ಥದಲ್ಲಿ ಬಳಸಿದ್ದರು.
‘ದಲಿತ ಪದದ ವ್ಯುತ್ಪತ್ತಿ ಸಂಸ್ಕೃತದ ‘ದಲ’ ಪದವೂ ಆಗಿದೆ ಎಂದು ಹೇಳುತ್ತಾರೆ. ಮಹಾರಾಷ್ಟ್ರದ ದಲಿತ್ ಪ್ಯಾಂಥರ್ಸ್ ಸಂಘಟನೆಯು ಸಾಮಾಜಿಕ-ಆರ್ಥಿಕ-ರಾಜಕೀಯವಾಗಿ ಹಿಂದುಳಿದ ಎಲ್ಲ ಜಾತಿಯ ಬಡವರನ್ನು ದಲಿತರೆಂದು ವ್ಯಾಖ್ಯಾನಿಸಿತ್ತು.
‘ಇದೇ ರೀತಿಯಲ್ಲಿ ದಲಿತ ಸಂಘರ್ಷ ಸಮಿತಿಯೂ ‘ದಲಿತ’ ಎಂದರೆ ಅಸ್ಪೃಶ್ಯರು ಮತ್ತು ಜಾತಿಯಿಂದ ಅವಮಾನಿತರಾದವರು. ಹಿಂದೂ ಚಾತುರ್ವರ್ಣ್ಯದ ಶ್ರಮವಿಭಜನೆಯ ಕುತಂತ್ರಕ್ಕೆ ಈಡಾಗಿ ಕೀಳು ವೃತ್ತಿಗಳನ್ನೇ ಅವಲಂಬಿಸಿ ಜಾತಿಯ ಹೆಸರು ಹೇಳಿಕೊಳ್ಳಲು ನಾಚಿಕೆ ಪಡುತ್ತಾರೋ ಅವರು ಎಂದು ವ್ಯಾಖ್ಯಾಸಲಾಗಿದೆ. ಜಾತಿ ಪದ್ಧತಿ, ಅಸ್ಪೃಶ್ಯತೆಯಂತಹ ಅಸಮಾನತೆಗಳನ್ನು ಸಹಿಸದೆ ಅಸಮಾನ ವ್ಯವಸ್ಥೆಯ ವಿರುದ್ಧ ‘ಸಿಡಿದೆದ್ದ’ ಜನರೆಂಬ ವ್ಯಾಖ್ಯಾನವೂ ಚಾಲ್ತಿಯಲ್ಲಿದೆ.
‘ಬಾಬಾಸಾಹೇಬ್ ಅಂಬೇಡ್ಕರ್ ‘ಡಿಪ್ರೆಸ್ಡ್ ಕ್ಲಾಸಸ್’ ಎಂದು ಅಸ್ಪೃಶ್ಯ ಸಮಾಜದ ಜನರನ್ನು ಕರೆದಿದ್ದರು. ಮುಂದೆ ದಲಿತ ಪದವನ್ನು ಇದಕ್ಕೆ ಸರಿಸಮಾನವಾಗಿ ಬಳಸಲಾಯಿತು. ಗಾಂಧೀಜಿಯವರ ‘ಹರಿಜನ’ ಪದಕ್ಕೆ ವಿರುದ್ಧವಾಗಿ ದಲಿತ ಪದವನ್ನು ಪ್ರತಿರೋಧದ ನೆಲೆಯಲ್ಲಿ ಹೆಚ್ಚು ಪ್ರಚುರಪಡಿಸಲಾಯಿತು. ಈಗ ಈ ಪದದ ಬಗ್ಗೆ ಸಲ್ಲದ ವಿವಾದ ಸೃಷ್ಟಿಸಿರುವುದು ಸರಿಯಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.