ಬೆಂಗಳೂರು: ‘ಶಿವ’ ನಾಟಕ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ ಸಂಘ ಪರಿವಾರದ ಸಂಘಟನೆಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ ಆಗ್ರಹಿಸಿದ್ದಾರೆ.
ಇದೇ 13ರಂದು ಶಿವ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಸಲಿಂಗಕಾಮದ ವಸ್ತು ಆಧರಿಸಿರುವ ನಾಟಕಕ್ಕೆ ಶಿವ ಎಂದು ಹೆಸರು ಇಟ್ಟಿದ್ದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ನಾಟಕ ಪ್ರದರ್ಶನವನ್ನು ಬಲವಂತವಾಗಿ ರದ್ದುಪಡಿಸಿರುವುದು ರಂಗಭೂಮಿಗೆ ಮಾಡಿದ ಅವಮಾನ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಘಟನೆಗಳ ಪರ ವಕಾಲತ್ತು ವಹಿಸಿದವರಂತೆ ಪೊಲೀಸರು ವರ್ತಿಸಿರುವುದು ಖಂಡನೀಯ. ಧ್ವನಿವರ್ಧಕ ಬಳಕೆ ಹಾಗೂ ನಾಟಕ ಪ್ರದರ್ಶನಕ್ಕೆ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಜಾಗೃತಿ ಥಿಯೇಟರ್ ಮಾಲೀಕರಾದ ಅರುಂಧತಿ ರಾಜ್ಗೆ ನೋಟಿಸ್ ಜಾರಿ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ನಾಟಕದ ಪ್ರತಿಯನ್ನು ಪೊಲೀಸರಿಗೆ ಕೊಟ್ಟು ಅನುಮತಿ ಪಡೆಯಬೇಕು ಎಂದು ಪೊಲೀಸ್ ಅಧಿಕಾರಿ ಅಲೋಕ್ ನಾಥ್ ಹೇಳಿರುವುದು ರಂಗಭೂಮಿಗೆ ಮಾರಕವಾದ ವರ್ತನೆ. ಬ್ರಿಟಿಷರು ಹಾಗೂ ತುರ್ತು ಪರಿಸ್ಥಿತಿ ಕಾಲದಲ್ಲಿ ಜಾರಿಯಲ್ಲಿದ್ದ ಕಾನೂನುಗಳನ್ನು ಜಾರಿಗೆ ತರುವ ಷಡ್ಯಂತ್ರ ಮತ್ತೆ ನಡೆಯುತ್ತಿದೆ. ರಂಗಾಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಈ ಧೋರಣೆಯನ್ನು ಅಕಾಡೆಮಿ ಖಂಡಿಸುತ್ತದೆ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.