ಬೆಂಗಳೂರು: ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ 50 ಸಾವಿರ ಇ–ಖಾತಾ ವಿತರಿಸುವ ಗುರಿ ಹೊಂದಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಹೇಳಿದರು.
ಹೆಬ್ಬಾಳದ ಎಚ್ಎಂಟಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಇ–ಖಾತಾ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರತಿಯೊಬ್ಬ ಆಸ್ತಿ ಮಾಲೀಕರಿಗೆ ನಿವೇಶನಗಳ ಮಾಲೀಕತ್ವಕ್ಕೆ ಅಧಿಕೃತ ದಾಖಲೆಯಾಗಿ ಇ-ಖಾತಾ ನೀಡಲಾಗುತ್ತಿದೆ. ಇದು ಸರ್ಕಾರದ ಪ್ರಮುಖ ಮತ್ತು ಕನಸಿನ ಯೋಜನೆಯಾಗಿದ್ದು, ಆಸ್ತಿ ಮಾಲೀಕರು ಈ ದಾಖಲೆಯನ್ನು ಪಡೆದುಕೊಳ್ಳಬೇಕು’ ಎಂದರು.
‘ನಾಗರಿಕರ ಮನೆ ಬಾಗಿಲಿಗೆ ಇ-ಖಾತಾ ನೀಡಬೇಕೆಂಬ ಉದ್ದೇಶದಿಂದ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದಾದ್ಯಂತ 55 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತೆಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಹೆಬ್ಬಾಳ ಕ್ಷೇತ್ರದಲ್ಲಿರುವ 50 ಸಾವಿರಕ್ಕೂ ಹೆಚ್ಚು ಸ್ವತ್ತುಗಳಲ್ಲಿ 13 ಸಾವಿರ ಆಸ್ತಿಗಳಿಗೆ ಇ–ಖಾತಾ ವಿತರಿಸಲಾಗಿದೆ. ಈ ಮೇಳದಲ್ಲಿ ನಾಲ್ಕು ಸಾವಿರ ಇ–ಖಾತಾ ವಿತರಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಹೆಬ್ಬಾಳ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹200 ಕೋಟಿ ಅನುದಾನಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕೃಷಿ ವಿಶ್ವ ವಿದ್ಯಾಲಯದ ಬಳಿ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇ–ಖಾತಾ ಮೇಳದಲ್ಲಿ ಮಂಗಳವಾರ 485 ಮಂದಿಗೆ ಟೋಕನ್ಗಳನ್ನು ನೀಡಲಾಗಿದ್ದು, 300 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ–ಖಾತಾ ನೀಡಲಾಯಿತು. ಉಳಿದವರ ದಾಖಲೆ ಪರಿಶೀಲನೆ, ಅನುಮೋದನೆ ಪ್ರಕ್ರಿಯೆ ಮುಂದುವರಿದಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತೆ ಆರ್. ಸ್ನೇಹಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.