ADVERTISEMENT

ಚುನಾವಣೆ: ‘ಎದ್ದೇಳು ಕರ್ನಾಟಕ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 15:50 IST
Last Updated 10 ಮಾರ್ಚ್ 2023, 15:50 IST

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಪ್ರಯುಕ್ತ ಸಮಾನ ಮನಸ್ಕರು ‘ಎದ್ದೇಳು ಕರ್ನಾಟಕ’ ಅಭಿಯಾನ ಹಮ್ಮಿಕೊಂಡಿದ್ದು, ‘ಇದು ಭ್ರಷ್ಟಾಚಾರ, ಬೆಲೆ ಏರಿಕೆ, ದ್ವೇಷ ರಾಜಕಾರಣ, ಜನಸಾಮಾನ್ಯರ ಸುಲಿಗೆ ಹಾಗೂ ನಮ್ಮ ಹೆಮ್ಮೆಯ ನಾಡನ್ನು ಎರಡನೇ ದರ್ಜೆ ರಾಜ್ಯವನ್ನಾಗಿಸುವುದರ ವಿರುದ್ಧ’ ಎಂದು ಹೇಳಿದ್ದಾರೆ.

ಮಾಜಿ ಕಾರ್ಮಿಕ ಮಂತ್ರಿ ಎಸ್‌.ಕೆ. ಕಾಂತ, ಸಾಹಿತಿಗಳಾದ ದೇವನೂರ ಮಹಾದೇವ, ಪುರುಷೋತ್ತಮ ಬಿಳಿಮಲೆ, ಕಮಲಾ ಹಂಪನಾ, ರಹಮತ್ ತರೀಕೆರೆ, ವಿಜಯಾ, ಪ್ರಾಧ್ಯಾಪಕರಾದ ಎ.ಆರ್. ವಾಸವಿ, ಅಲ್ಲಮಪ್ರಭು ಬೆಟ್ಟದೂರು, ಮಹಿಳಾ ಚಳವಳಿಗಾರ್ತಿ ದು. ಸರಸ್ವತಿ, ಮಾಜಿ ಸಚಿವ ಎಚ್. ಏಕಾಂತಯ್ಯ, ಪರಿಸರ ತಜ್ಞೆ ತಾರಾ ರಾವ್ ಹಾಗೂ ವೈದ್ಯ ಡಾ. ಶ್ರೀನಿವಾಸ್ ಕಕ್ಕಿಲಾಯ ಅವರು ಈ ಅಭಿಯಾನ ಕೈಗೊಂಡಿದ್ದಾರೆ. ‘ಈ ಅವಕಾಶ ನಮ್ಮ ಕೈ ತಪ್ಪಿ ಹೋಗದಿರಲಿ… ಕರ್ನಾಟಕ ಮತ್ತೆ ಕತ್ತಲೆಗೆ ಜಾರದಿರಲಿ…’ ಎಂದು ಅವರು ಕರೆ ನೀಡಿದ್ದಾರೆ.

‘ಇಂದಿನ ಉಸಿರುಗಟ್ಟಿದ ವಿಷಮಯ ರಾಜಕೀಯ ವಾತಾವರಣದಲ್ಲಿ, ನಮ್ಮ ನಾಡು ದೀರ್ಘ ಉಸಿರೆಳೆದುಕೊಂಡು ಚೇತರಿಸಿಕೊಳ್ಳುತ್ತದೆಯೊ ಇಲ್ಲವೊ ಎಂಬುದನ್ನು ಮುಂಬರುವ ಚುನಾವಣೆ ನಿರ್ಧರಿಸುತ್ತದೆ. ಅದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಕಂಡಿಲ್ಲದ ಕೆಡುಕಿನ ದಿನಗಳನ್ನು ಕಳೆದ 4 ವರ್ಷಗಳಲ್ಲಿ ಕರ್ನಾಟಕ ಕಂಡಿದೆ. ಜನಮತವಿಲ್ಲವಾದರೂ ಅಧಿಕಾರ ಕಬಳಿಸಿದ ಸರ್ಕಾರ, ಈ ನಾಡಿಗೆ ತಂದದ್ದು ಅವನತಿ ಮಾತ್ರ’ ಎಂದು ಹೇಳಿದ್ದಾರೆ.

ADVERTISEMENT

‘ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು. ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ. ನಾಡಿನ ಅಸ್ಮಿತೆ, ಪರಂಪರೆ, ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಕಾಯಕವನ್ನು ನಾವು ಕೈಗೆತ್ತಿಕೊಳ್ಳಲೇಬೇಕು. ಪಕ್ಷ, ಸಂಘಟನೆ, ಜಾತಿ, ಧರ್ಮದ ಅಂಟುಗಳನ್ನು ಬಿಟ್ಟು, ಒಟ್ಟುಗೂಡಿ ರಾಜ್ಯ ಉಳಿಸುವ ಈ ಅಭಿಯಾನ ಒಂದು ಆಶಾಕಿರಣವಾಗಿದೆ. ಆದ್ದರಿಂದ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಅಭಿಯಾನದ ಭಾಗವೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ: 9738833055. ನೋಂದಾಯಿಸಿಕೊಳ್ಳುವ ಲಿಂಕ್: https://forms.gle/SZi41nmud8Yunsvg7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.