ADVERTISEMENT

ಕಾರ್ಮಿಕನಿಗೆ ಗಾಯ: ಮಾಲೀಕ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:19 IST
Last Updated 29 ಮೇ 2019, 20:19 IST

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಹೈ–ಟೆನ್ಷನ್ ವೈರ್ ತಗುಲಿ ಕಾರ್ಮಿಕ ಸತೀಶ್ (23) ಎಂಬುವರು ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ, ಕಟ್ಟಡದ ಮಾಲೀಕ ಸೇರಿ ಇಬ್ಬರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥನಗರದ ನಿರ್ಮಾಣ ಹಂತದ ಕಟ್ಟಡದ ಮೇಲೆಯೇಹೈ– ಟೆನ್ಷನ್ ವೈರ್ ಹಾದು ಹೋಗಿದೆ. ಮೇ 27ರಂದು ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂತಿ ತಗುಲಿ ಸತೀಶ್ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಹದ ಶೇ 65ರಷ್ಟು ಭಾಗ ಸುಟ್ಟಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

‘ಗಾಯಾಳು ಸತೀಶ್ ಅವರ ಹೇಳಿಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.ಕಟ್ಟಡದ ಮಾಲೀಕ ಜಯಕುಮಾರ್ ಹಾಗೂ ಮೇಸ್ತ್ರಿ ರಾಮಚಂದ್ರ ಅವರನ್ನು ಬಂಧಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಮಾಡಲಾಗಿದ್ದು, ಅವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಬಸವೇಶ್ವರನಗರ ಪೊಲೀಸರು ತಿಳಿಸಿದರು.

ADVERTISEMENT

‘ಹೈ–ಟೆನ್ಷನ್ ವೈರ್ ಕೆಳಗೆ ಕಟ್ಟಡ ನಿರ್ಮಿಸಬಾರದು ಎಂಬ ನಿಯಮವಿದೆ. ಅದನ್ನು ಉಲ್ಲಂಘಿಸಿ ಮಾಲೀಕ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಬೆಸ್ಕಾಂ ನೌಕರ ಸಾವು; ಅಧಿಕಾರಿಗಳ ವಿರುದ್ಧ ಎಫ್‌ಐಆರ್‌: ಆರ್‌.ಟಿ.ನಗರದ 1ನೇ ಹಂತದಲ್ಲಿ ಮೇ 27ರಂದು ವಿದ್ಯುತ್ ಕಂಬ ಮರು ಸ್ಥಾಪನೆ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ನೌಕರ ಅಶೋಕ್‌ಕುಮಾರ್ (31) ಅವರು ಮೃತಪಟ್ಟ ಪ್ರಕರಣ ಸಂಬಂಧ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ದಾಖಲಾಗಿದೆ.

‘ಅಶೋಕಕುಮಾರ ಸಾವಿನ ಬಗ್ಗೆ ಅವರ ಪತ್ನಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬೈರೇಗೌಡ,ಸಹಾಯಕ ಎಂಜಿನಿಯರ್‌ ಶಿವಾಜಿರಾವ್, ಕಿರಿಯ ಎಂಜಿನಿಯರ್‌ ಲೋಕೇಶ್ ಹಾಗೂ ಲೈನ್‌ಮ್ಯಾನ್ ರಾಜಾರಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆರ್‌.ಟಿ.ನಗರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.