ಬೆಂಗಳೂರು: ಹೆದ್ದಾರಿ ಬದಿಯಲ್ಲಿ ದಿನವಿಡೀ ಕಾದು ಕುಳಿತಿದ್ದ ಆರೋಪಿಗಳು ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿದ್ದ ಮಹಿಳೆಯನ್ನು ನಡು ರಸ್ತೆಯಲ್ಲಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅರ್ಚನಾ ರೆಡ್ಡಿ (42) ಕೊಲೆಯಾದವರು. ಮೂಲತಃ ಜಿಗಣಿಯವರಾದ ಅವರು ಪ್ರಸ್ತುತ ಬೆಳ್ಳಂದೂರಿನಲ್ಲಿ ವಾಸವಿದ್ದರು. ಸೋಮವಾರ ಜಿಗಣಿ ಪುರಸಭೆಗೆ ಮತದಾನ ನಡೆದಿತ್ತು. ಮತ ಹಾಕಲು ಹೋಗಿದ್ದ ಅರ್ಚನಾ, ರಾತ್ರಿ 10.30ರ ಸುಮಾರಿಗೆ ಮಗನೊಂದಿಗೆ ಮನೆಗೆ ಮರಳುತ್ತಿದ್ದರು. ಹೊಸರೋಡ್ ಸಿಗ್ನಲ್ ಬಳಿ ಕಾರು ಅಡ್ಡಗಟ್ಟಿದ್ದ ಆರೋಪಿಗಳು ಮಚ್ಚು ಮತ್ತು ಲಾಂಗ್ಗಳಿಂದ ಅರ್ಚನಾ ಮೇಲೆ ಮನಸೋ ಇಚ್ಛೆ ದಾಳಿ ನಡೆಸಿದ್ದರು. ಇದನ್ನು ಕಂಡು ಭಯಭೀತರಾಗಿದ್ದ ಕಾರು ಚಾಲಕ ಹಾಗೂ ಅರ್ಚನಾ ಅವರ ಮಗ ಕಾರಿನಿಂದ ಇಳಿದು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೊದಲ ಪತಿಯಿಂದ ಬೇರೆಯಾಗಿದ್ದ ಅರ್ಚನಾ ಬಳಿಕ ನವೀನ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ನಂತರ ದಂಪತಿ ನಡುವೆ ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ಜಿಗಣಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಬಳಿಕ ನವೀನ್ನಿಂದ ದೂರವಾಗಿದ್ದ ಅರ್ಚನಾ, ಮಗನೊಂದಿಗೆ ಬೆಳ್ಳಂದೂರಿನ ಮನೆಯೊಂದರಲ್ಲಿ ವಾಸವಿದ್ದರು’ ಎಂದು ಮಾಹಿತಿ ನೀಡಿದರು.
‘ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಳೆ ವೈಷಮ್ಯದಿಂದಾಗಿ ನವೀನ್ ಹಾಗೂ ಆತನ ಸಹಚರ ಸಂತೋಷ್ ಎಂಬುವರೇ ಹತ್ಯೆ ಮಾಡಿರಬಹುದು ಎಂಬ ಅನುಮಾನ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.