ADVERTISEMENT

ತುರ್ತು ಪರಿಸ್ಥಿತಿ | ನ್ಯಾಯಮೂರ್ತಿಗಳಿಗೆ ವರ್ಗಾವಣೆ ಶಿಕ್ಷೆ: ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 22:58 IST
Last Updated 4 ಜುಲೈ 2025, 22:58 IST
<div class="paragraphs"><p>ನಗರದಲ್ಲಿ ಶುಕ್ರವಾರ ಪೆಂಗ್ವಿನ್ ರ್‍ಯಾಂಡಮ್ ಹೌಸ್‌ ಇಂಡಿಯಾ ಆಯೋಜಿಸಿದ್ದ ‘ದಿ ಕಾನ್‌ಸೈಸ್‌ ನೆಟ್‌ವರ್ಕ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೆ. ಮರುಳಸಿದ್ಧಪ್ಪ, ಎ.ವಿ.ಎಸ್. ನಂಬೂದಿರಿ, ಎನ್. ಸಂತೋಷ್ ಹೆಗ್ಡೆ, ಚಿರಂಜೀವಿ ಸಿಂಘ್‌, ಸುಗತ ಶ್ರೀನಿವಾಸರಾಜು ಪಾಲ್ಗೊಂಡಿದ್ದರು.&nbsp; </p></div>

ನಗರದಲ್ಲಿ ಶುಕ್ರವಾರ ಪೆಂಗ್ವಿನ್ ರ್‍ಯಾಂಡಮ್ ಹೌಸ್‌ ಇಂಡಿಯಾ ಆಯೋಜಿಸಿದ್ದ ‘ದಿ ಕಾನ್‌ಸೈಸ್‌ ನೆಟ್‌ವರ್ಕ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೆ. ಮರುಳಸಿದ್ಧಪ್ಪ, ಎ.ವಿ.ಎಸ್. ನಂಬೂದಿರಿ, ಎನ್. ಸಂತೋಷ್ ಹೆಗ್ಡೆ, ಚಿರಂಜೀವಿ ಸಿಂಘ್‌, ಸುಗತ ಶ್ರೀನಿವಾಸರಾಜು ಪಾಲ್ಗೊಂಡಿದ್ದರು. 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ದೇಶದಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸದ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ADVERTISEMENT

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ‘ದಿ ಕನ್‌ಸೈಸ್ ನೆಟ್‌ವರ್ಕ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆ ಸ್ಥಳೀಯ ನಾಯಕರು, ವಿದ್ಯಾರ್ಥಿಗಳು ಹಾಗೂ ರಾಜಕಾರಣಿಗಳನ್ನು ಬಂಧಿಸಲಾಯಿತು. ಆಗ ಕಾರ್ಯ ನಿಮಿತ್ತ ನಗರಕ್ಕೆ ಬಂದಿದ್ದ ಅಟಲ್ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಹಾಗೂ ಮಧು ದಂಡವತೆ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. ಆಗಷ್ಟೇ ವಕೀಲಿಕೆ ಆರಂಭಿಸಿದ್ದ ನಾನು, ಮುಂಬೈ, ಚೆನ್ನೈ, ದೆಹಲಿಗೆ ತೆರಳಿ ಹಿರಿಯ ವಕೀಲರನ್ನು ಭೇಟಿ ಮಾಡಿ, ರಾಜಕಾರಣಿಗಳ ಪರ ವಾದ ಮಾಡುವಂತೆ ಮನವಿ ಮಾಡಿದೆ’ ಎಂದು ನೆನಪಿಸಿಕೊಂಡರು.

‘ತುರ್ತು ಪರಿಸ್ಥಿತಿ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಆದರೆ, ನ್ಯಾಯಾಲಯದಲ್ಲಿ ಅವರ ಪರ ಹಾಜರಾಗಿ, ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದೆ. ನನ್ನ ಅಭಿಪ್ರಾಯದ ಪ್ರಕಾರ 18 ತಿಂಗಳು ದೇಶದ ಸಂವಿಧಾನ ಕಾರ್ಯನಿರ್ವಹಿಸಲೇ ಇಲ್ಲ. ಜನರು ಸಾಕಷ್ಟು ತೊಂದರೆಗೆ ಒಳಗಾದರು. ಸರ್ಕಾರದ ನಿರ್ಧಾರ ಪ್ರಶ್ನಿಸುವ ಹಾಗೂ ಜೋರಾಗಿ ಮಾತನಾಡಲು ಆಗದ ಪರಿಸ್ಥಿತಿ ಇತ್ತು’ ಎಂದರು.

ಒತ್ತಡದ ಪರಿಣಾಮ ಕೊನೆಗೂ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು. ಇದೆಲ್ಲವೂ ಒಬ್ಬ ವ್ಯಕ್ತಿ ತನ್ನ ಸ್ಥಾನ ಉಳಿಸಿಕೊಳ್ಳಲು ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಜವಾಗಲೂ ಏನು ನಡೆಯಿತು ಎಂಬುದರ ಬಗ್ಗೆ ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಇಂತಹ ಪರಿಸ್ಥಿತಿ ಬಾರದಿರಲಿ ಎಂದು ಹೇಳಿದರು.

ಪತ್ರಕರ್ತ ಸುಗತ ಶ್ರೀನಿವಾಸ್ ಮಾತನಾಡಿ, ‘ಸಂತೋಷ್‌ ಹೆಗ್ಡೆ ಅವರು ಲೋಕಾಯುಕ್ತ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದರು. ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿದರು. ಅವರು ಅಧಿಕಾರದಿಂದ ಇಳಿದ ಬಳಿಕ ಸಂಸ್ಥೆ ಬಲ ಕಳೆದುಕೊಂಡಂತಾಗಿದೆ’ ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್‌, ಸಾಹಿತಿ ಕೆ.ಮರುಳಸಿದ್ದಪ್ಪ, ಪತ್ರಕರ್ತ ಎ.ವಿ.ಎಸ್.ನಂಬೂದಿರಿ ಮಾತನಾಡಿದರು. ಬಳಿಕ ಲೇಖಕರ ಜತೆ ಸಂವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.