ಬೆಂಗಳೂರು: ಕುಡಿಯುವ ನೀರು ಕಲುಷಿತವಾದಲ್ಲಿ ಅನೇಕ ರೋಗಗಳು ಹರಡುವ ಸಂಭವಿರುತ್ತದೆ. ಹಾಗಾಗಿ ನೀರಿನ ಶುದ್ಧತೆಯ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಕಲುಷಿತ ನೀರು ಕುಡಿದಲ್ಲಿ ಅತಿಸಾರ, ಕಾಮಾಲೆ, ಕಾಲರಾ, ಪೋಲಿಯೊ, ಚರ್ಮರೋಗ, ಆಮಶಂಕೆ ಸೇರಿದಂತೆ ವಿವಿಧ ರೋಗಗಳು ಬರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಕುಡಿಯುವ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ, ಕುಡಿಯುವ ನೀರಿನಲ್ಲಿ ಕೈಗಳನ್ನು ಅದ್ದಬಾರದು. ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳಿಂದ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಪರವಾನಗಿ ಪಡೆದ ಸಂಸ್ಥೆಗಳಿಂದ ಕುಡಿಯುವ ನೀರಿನ ಬಾಟಲ್ಗಳನ್ನು ಪಡೆದುಕೊಳ್ಳಬಹುದಾಗಿದೆ. ಮನೆಯ ಸುತ್ತಮುತ್ತಲಿನ ಸ್ಥಳದಲ್ಲಿ ನೀರು ನಿಲ್ಲದಂತೆ ಸಹ ನೋಡಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಪರವಾನಗಿ ಇಲ್ಲದ ವ್ಯಕ್ತಿಗಳು ನೀರು ಸರಬರಾಜು ಮಾಡದಂತೆ ನೋಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ. ಆಹಾರಕ್ಕೆ ಕೂಡ ಕುದಿಸಿದ ನೀರನ್ನೇ ಬಳಕೆ ಮಾಡಬೇಕು. ಕುಡಿಯಲು ಬಳಸದ ನೀರಿಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ರಾಸಾಯನಿಕಗಳನ್ನು ಬಳಸಬೇಕು ಎಂದು ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.