ADVERTISEMENT

ಕೆರೆಗೆ ತ್ಯಾಜ್ಯ; ಪರಿಸರ ಪ್ರೇಮಿಗಳ ಕಳವಳ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 20:16 IST
Last Updated 22 ಜನವರಿ 2019, 20:16 IST
ಕೆರೆಗೆ ಹೋಗುವ ರಸ್ತೆಯ ಬದಿಗಳಲ್ಲೇ ತ್ಯಾಜ್ಯ ಎಸೆದಿರುವ ದೃಶ್ಯ 
ಕೆರೆಗೆ ಹೋಗುವ ರಸ್ತೆಯ ಬದಿಗಳಲ್ಲೇ ತ್ಯಾಜ್ಯ ಎಸೆದಿರುವ ದೃಶ್ಯ    

ಹೊಸಕೋಟೆ: ಪಟ್ಟಣದ ಹೊರವಲಯದಲ್ಲಿರುವ ಅಮಾನಿ ದೊಡ್ಡಕೆರೆ ಒಡಲಿಗೆ ಕಿಡಿಗೇಡಿಗಳು ತ್ಯಾಜ್ಯ ಸುರಿಯುವ, ಬೆಂಕಿ ಹಾಕುವ ಕೃತ್ಯ ಎಸಗುತ್ತಿದ್ದಾರೆ.

ಈ ಕೆರೆ ಪಟ್ಟಣದ ಜಲಮೂಲವೂ ಹೌದು. ಸಾವಿರಾರು ವಲಸೆಹಕ್ಕಿಗಳಿಗೆ ಆಶ್ರಯ ತಾಣವೂ ಆಗಿದೆ. ಪದೇ ಪದೆ ಬೆಂಕಿ ಹಚ್ಚುವುದರಿಂದ ಬರುವ ಹೊಗೆ ಪರಿಸರಕ್ಕೆ ಹಾನಿ ಮಾಡುತ್ತಿದೆ. ಇಲ್ಲಿ ಬೀಡು ಬಿಟ್ಟಿರುವ ಫೆಲಿಕಾನ್ ಹಕ್ಕಿಗಳಿಗೂ ತೊಂದರೆಯಾಗುತ್ತಿದೆ.
ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವಲ್ಲಿ ಪಟ್ಟಣದ ಯುವಕರ ತಂಡವೊಂದು ಕಳೆದೆರೆಡು ವರ್ಷಗಳಿಂದ ಕಾರ್ಯಕ್ರಮ ನಡೆಸಿದ್ದಾರೆ.

ಕೆರೆಯ ಒಡಲಿಗೆ ತ್ಯಾಜ್ಯ ಹಾಕದಂತೆ ಶ್ರಮಿಸುತ್ತಿದ್ದಾರೆ. ಕೆರೆಯ ಕಟ್ಟೆಯ ಮೇಲೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಳೆದ ಪರಿಸರ ದಿನದಂದು ನೆಡಲಾಗಿದೆ. ಸ್ವಚ್ಛತೆ ನಡೆದಿದೆ. ಆದರೂ ಇತ್ತೀಚೆಗೆ ತ್ಯಾಜ್ಯ ತಂದು ಹಾಕುವವರು ಹೆಚ್ಚಿದ್ದಾರೆ.
ರಜಾ ದಿನಗಳಲ್ಲಿ ಕುಡುಕರು, ಮೋಜು ಮಾಡಲು ಬರುವವರ ಕಾಟ ಹೆಚ್ಚಿದೆ ಎನ್ನುತ್ತಾರೆ ಕೆರೆಯ ಪಕ್ಕದಲ್ಲಿರುವ ರೈತ ಗೋವಿಂದರಾಜು.

ADVERTISEMENT

ಕೆರೆಯನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವಲ್ಲಿ ‘ಪಾರಂಪರಿಕ ತಾಣ ’ಎಂದು ಘೋಷಣೆ ಮಾಡುವಂತೆ ಕಳೆದ 9 ತಿಂಗಳಿಂದ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೆಟ್ಟ ಗಿಡಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಯವರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತ್ಯಾಜ್ಯ ವಸ್ತುಗಳನ್ನು ಹಾಕುವುದು ತಡೆಗಟ್ಟಲೂ ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರಾದ ಸಿ.ಎಸ್.ನಾಗಭೂಷಣ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.