ಬೆಂಗಳೂರು: ವಂಚನೆ ಪ್ರಕರಣದ ವಿಚಾರಣೆಗಾಗಿ ಮಹಿಳಾ ಆಯೋಗದ ಕಚೇರಿಗೆ ಬಂದಿದ್ದ ಮಹಿಳೆಯರ ಜೊತೆ ಇಬ್ಬರು ಅನುಚಿತವಾಗಿ ವರ್ತಿಸಿ ಗಲಾಟೆ ಮಾಡಿದ್ದು, ಆ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಎನ್.ಪ್ರವೀಣ್ ಹಾಗೂ ಆತನ ಸಹೋದರ ಎನ್.ಪ್ರಶಾಂತ್ ಆಯೋಗದ ಕಚೇರಿಯಲ್ಲಿ ಗಲಾಟೆ ಮಾಡಿದ್ದಾರೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ನೀಡಿರುವ ದೂರಿನಡಿ ಅವರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಾಸಾ ವಿಜ್ಞಾನಿ ಎಂದು ಸುಳ್ಳು ಹೇಳಿದ್ದ ಪ್ರವೀಣ್, 15ಕ್ಕೂ ಹೆಚ್ಚು ಮಹಿಳೆಯರಿಂದ ₹4 ಲಕ್ಷದಿಂದ ₹ 13 ಲಕ್ಷದವರೆಗೆ ಹಣ ಪಡೆದು ವಂಚಿಸಿದ್ದ. ಆ ಸಂಬಂಧ ಮಹಿಳೆಯರು ಆಯೋಗಕ್ಕೆ ದೂರು ನೀಡಿದ್ದರು.’
‘ಮೇ 10ರಂದು ಪ್ರಕರಣದ ವಿಚಾರಣೆಗೆ ಬಂದಿದ್ದ ಈ ಇಬ್ಬರು, ದೂರುದಾರ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದರು. ಜೀವ ಬೆದರಿಕೆ ಹಾಕಿ ಥಳಿಸಲು ಮುಂದಾಗಿದ್ದರು. ವಿಚಾರಣೆ ನಡೆಸುತ್ತಿದ್ದವರ ಫೋಟೊವನ್ನು ತೆಗೆದುಕೊಂಡು ಮಾಧ್ಯಮಗಳಿಗೆ ಕೊಟ್ಟು ಆಯೋಗದ ತೇಜೊವಧೆಗೂ ಯತ್ನಿಸಿದ್ದಾರೆ. ಈ ಬಗ್ಗೆ ಆಯೋಗದ ಅಧ್ಯಕ್ಷೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.