ADVERTISEMENT

ಸ್ಟ್ಯಾನ್‌ ಸ್ವಾಮಿಯವರಿಗೆ ಸಂತ ಪದವಿ ನೀಡಿ: ಕನ್ನಡ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 20:33 IST
Last Updated 15 ಜುಲೈ 2021, 20:33 IST

ಬೆಂಗಳೂರು: ಆದಿವಾಸಿಗಳ ಕಲ್ಯಾಣಕ್ಕಾಗಿ ಹೋರಾಡಿ ಮಡಿದ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಸಂತ ಪದವಿ ನೀಡಬೇಕು ಎಂದು ಪೋಪ್‌ ಫ್ರಾನ್ಸಿಸ್‌ ಅವರಿಗೆ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಮನವಿ ಮಾಡಿದೆ.

ನಗರದಲ್ಲಿ ಗುರುವಾರ ಆನ್‌ಲೈನ್‌ನಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಈ ವಿಷಯ ಮಂಡಿಸಿದರು. ಭಾರತದಲ್ಲಿರುವ ರೋಮ್‌ನ ರಾಯಭಾರಿ ಹಾಗೂ ಭಾರತದ ಧರ್ಮಾಧ್ಯಕ್ಷರ ಕೂಟಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.

ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಅದಿವಾಸಿಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಸ್ಟ್ಯಾನ್‌ ಸ್ವಾಮಿಯವರು. ಕಠಿಣವಾದ ಯುಎಪಿಎ ಜಾರಿ ಮಾಡುವ ಮೂಲಕ ಪ್ರಭುತ್ವವು ಅವರ ಸಾವಿಗೆ ಕಾರಣವಾಗಿದೆ. ಈ ಕಾಯ್ದೆ ರದ್ದತಿಗೆ ಎಲ್ಲರೂ ಹೋರಾಡಬೇಕು’ ಎಂದರು.

ADVERTISEMENT

ಫಾದರ್‌ ಸೈಮನ್‌ ಬರ್ತಲೊಮಿಯೊ ಅಧ್ಯಕ್ಷತೆ ವಹಿಸಿದ್ದರು. ಸಿ. ಮರಿಜೋಸೆಫ್‌ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ. ದೇವಕುಮಾರ್, ಶಿವಸುಂದರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.