ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಂದ ದರೋಡೆಗೆ ಸಂಚು ರೂಪಿಸುತ್ತಿದ್ದ ಐದು ರೌಡಿಶೀಟರ್ಗಳ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ (29), ಮಂಜುನಾಥ್ (28), ಶಾಕೀರ್ (22), ವಿನಯ್ (28) ಹಾಗೂ ಸಂದೀಪ್ (28) ಬಂಧಿತರು.
‘ಸಂಪಂಗಿರಾಮನಗರದ ಮಿಷನ್ ರಸ್ತೆಯ ತಿರುವಿನಲ್ಲಿ ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ನಗದು-ಚಿನ್ನ ದರೋಡೆ ಮಾಡಲು ಆರೋಪಿಗಳು ಸಜ್ಜಾಗಿದ್ದರು. ಈ ವೇಳೆ ಎಲ್ಲರನ್ನೂ ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಸಂತೋಷ್ ಸಂಪಂಗಿರಾಮನಗರದ ರೌಡಿಶೀಟರ್ ಆಗಿದ್ದು, ಕೊಲೆ ಯತ್ನ, ದರೋಡೆ ಯತ್ನ ಸೇರಿದಂತೆ ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳಿವೆ. ಆಗಸ್ಟ್ ನಲ್ಲಿ ಕೊಲೆ ಯತ್ನದ ಬಳಿಕ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಸಂದೀಪ್, ವಿನಯ್, ಮಂಜುನಾಥ್ ಸಹ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ರೌಡಿಶೀಟರ್ ಗಳಾಗಿದ್ದು, ಕೊಲೆ ಮತ್ತು ದರೋಡೆ ಪ್ರಕರಣಗಳಿವೆ. ಬಂಧಿತರ ವಿರುದ್ಧ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.