ಬೆಂಗಳೂರು: ಒಎಲ್ಎಕ್ಸ್ ಜಾಲತಾಣದಲ್ಲಿ ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಜೈಲಿನಿಂದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ವಾಜೀಬ್ ಖಾನ್ (30), ಸಾಹಿಲ್ (20), ಶಾಹೀದ್ (28) ಹಾಗೂ ಉಮೇರ್ ಖಾನ್ (31) ಬಂಧಿತರು.
ಆರೋಪಿಗಳ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವೊಂದರಲ್ಲಿ ಆಂಧ್ರಪ್ರದೇಶ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹೈದರಾಬಾದ್ನ ಕೇಂದ್ರ ಕಾರಾಗೃಹದಲ್ಲಿಇಟ್ಟಿದ್ದರು.
ಬೆಂಗಳೂರಿನಲ್ಲಿ ನಡೆದಿದ್ದ ಸೈಬರ್ ವಂಚನೆ ಪ್ರಕರಣಗಳಲ್ಲೂ ಆರೋಪಿಗಳು ಭಾಗಿಯಾಗಿ
ದ್ದರಿಂದ ನ್ಯಾಯಾಲಯದಿಂದ ಪೊಲೀಸರು ಅನುಮತಿ ಪಡೆದು, ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಇವರು 30ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ.
ಕ್ಯೂಆರ್ ಕೋಡ್ನಿಂದ ವಂಚನೆ: ಒಎಲ್ಎಕ್ಸ್ ಜಾಲತಾಣದಲ್ಲಿ ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಆರೋಪಿ ಗಳು, ಆನ್ಲೈನ್ ಪಾವತಿ ಮಾಡುವಂತೆ ಕ್ಯೂಆರ್ ಕೋಡ್ ಕಳಿಸುತ್ತಿದ್ದರು. ಕೋಡ್
ಸ್ಕ್ಯಾನ್ ಮಾಡುವಂತೆ ಹೇಳಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದರು.
'ವಾಟ್ಸ್ ಆ್ಯಪ್ ಡಿಪಿಗಳಲ್ಲಿ ಪೊಲೀಸ್ ಹಾಗೂ ಸೇನೆಯ ಅಧಿಕಾರಿಗಳ ಭಾವಚಿತ್ರ ಹಾಕಿ ಜನರನ್ನು ನಂಬಿಸುತ್ತಿದ್ದರು. ತಾವು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ, ದ್ವಿಚಕ್ರ ವಾಹನ ಹಾಗೂ ಕಾರು ಮಾರಾಟದ ಜಾಹೀರಾತು ಗಳನ್ನು ಜಾಲತಾಣಗಳಲ್ಲಿ
ಹಾಕುತ್ತಿದ್ದರು. ಗ್ರಾಹಕರಿಂದ ಹಂತ ಹಂತವಾಗಿ ಮುಂಗಡ ಪಾವತಿ ಮಾಡಿಸಿಕೊಂಡು, ವಾಹನ ನೀಡದೆ ವಂಚಿಸು
ತ್ತಿದ್ದರು. ಹಣ ಪಡೆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.