ADVERTISEMENT

ತೆರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 16:35 IST
Last Updated 18 ಸೆಪ್ಟೆಂಬರ್ 2018, 16:35 IST

ಬೆಂಗಳೂರು: ಬಂದ್‌ ಆಗಿದ್ದ ಕಂಪನಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ, ಮಾಲೀಕರು ಹಾಗೂ ತೆರಿಗೆ ಇಲಾಖೆಗೆ ವಂಚಿಸಲಾಗಿದೆ. ಆ ಸಂಬಂಧ ಮೈಕೊ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಬಾಲಮುರುಗನ್ ಎಂಬುವರು ‘ಗ್ಲೋಬಲ್‌ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದರು. ಕೆಲವು ಕಾರಣಗಳಿಂದ ಐದು ವರ್ಷಗಳ ಹಿಂದೆಯೇ ಕಂಪನಿ ಬಂದ್‌ ಮಾಡಿದ್ದರು. ಅದೇ ಕಂಪನಿ ಹೆಸರು ಬಳಸಿಕೊಂಡ ಅಪರಿಚಿತರು, ನಿರಂತರವಾಗಿ ವಹಿವಾಟು ನಡೆಸಿ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

‘ಬಾಲಮುರುಗನ್, ತೆರಿಗೆ ಪಾವತಿಸಲೆಂದು ಇತ್ತೀಚೆಗೆ ತೆರಿಗೆ ಇಲಾಖೆಗೆ ಹೋಗಿದ್ದರು. ‘ನಿಮ್ಮ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಇದೆ’ ಎಂದು ಅಧಿಕಾರಿಗಳು ಹೇಳಿದ್ದರು. ‘ನಾನು ₹1 ಕೋಟಿ ತೆರಿಗೆ ಮಾತ್ರ ಪಾವತಿಸಬೇಕು’ ಎಂದು ಉತ್ತರಿಸಿದ್ದರು. ಅವಾಗಲೇ ಅಧಿಕಾರಿಗಳು, ‘ಗ್ಲೋಬಲ್‌ ಎಂಟರ್‌ಪ್ರೈಸಸ್ ಕಂಪನಿ ಮೂಲಕ ವಹಿವಾಟು ನಡೆಸಿದ್ದೀರಾ’ ಎಂದಿದ್ದರು. ‘ಆ ಕಂಪನಿ ಬಂದ್‌ ಮಾಡಿ ಐದು ವರ್ಷಗಳಾಗಿವೆ. ಯಾರೋ ನನ್ನ ಹೆಸರಿನಲ್ಲಿ ವಹಿವಾಟು ನಡೆಸಿ ವಂಚಿಸಿದ್ದಾರೆ’ ಎಂದು ಅಧಿಕಾರಿಗಳಿಗೆ ಹೇಳಿದ್ದ ಬಾಲಮುರುಗನ್, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದರು.

ADVERTISEMENT

ನೌಕರರ ಶಾಮೀಲು ಶಂಕೆ: ವಂಚನೆ ಕೃತ್ಯದಲ್ಲಿ ಕಂಪನಿಯ ನೌಕರರೇ ಶಾಮೀಲಾಗಿರುವ ಶಂಕೆ ಪೊಲೀಸರಿಗೆ ಇದೆ.

‘ಕಂಪನಿಲೆಕ್ಕಪತ್ರ ನೋಡಿಕೊಳ್ಳಲು ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ಅವರ ಮೇಲೆಯೇ ಅನುಮಾನವಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕಂಪನಿ ಬಂದ್ ಮಾಡಿದ ಬಳಿಕ ಮುರುಗನ್ ಹೆಸರು, ನಕಲಿ ಸಹಿ ಹಾಗೂ ಪಾನ್ ಕಾರ್ಡ್ ಬಳಸಿಕೊಂಡೇ ಕಂಪನಿ ಪುನಃ ಆರಂಭವಾಗಿರುವಂತೆ ತೋರಿಸಲಾಗಿದೆ. ಆ ಸಂಬಂಧ ತೆರಿಗೆ ಇಲಾಖೆಗೂ ದಾಖಲೆಗಳನ್ನು ಸಲ್ಲಿಸಲಾಗಿದೆ. ನಂತರ, ₹12 ಕೋಟಿ ವಹಿವಾಟು ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.