ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರ ಪೈಕಿ ಅತಿ ಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕರೊಬ್ಬರಿಗೆ ಪ್ರತಿ ತಿಂಗಳು 10 ಗ್ರಾಂ ಚಿನ್ನದ ಪದಕ ನೀಡುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಕಟಿಸಿದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಶುಕ್ರವಾರ ಅವರು ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು, ಹಾಗೂ 41 ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ವೇಳೆ ತಾವು ವೈಯಕ್ತಿಕವಾಗಿ ಈ ಪದಕ ನೀಡುತ್ತಿರುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಬಸ್ ಕಾರ್ಯಾಚರಣಿ ವ್ಯವಸ್ಥೆ ಹೇಗಿರಬೇಕು, ಅಂತರ ಕಾಪಾಡುವುದು, ಕಾರ್ಮಿಕರನ್ನು ಸ್ಥಳಾಂತರಿಸುವಾಗ ಹೆಚ್ಚಿನ ಕಾಳಜಿ ವಹಿಸುವುದು. ಬಸ್ ನಿಲ್ದಾಣಗಳನ್ನು ಸ್ಯಾನಿಟೈಸ್ಮಾಡುವುದು, ಸಿಬ್ಬಂದಿ ಮಾಸ್ಕ್ ಕಡ್ಡಾಯ ಧರಿಸುವುದು ಸಹಿತ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರಿಗೆ ಸಂಸ್ಥೆಗಳು ಕಾರ್ಮಿಕರ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಯಿತು.
ಫಿವರ್ ಕ್ಲಿನಿಕ್ ಬಸ್: ಸಚಿವರು ಇದೇ ವೇಳೆ ಕೋವಿಡ್-19 ಮೊಬೈಲ್ ಫಿವರ್ ಕ್ಲಿನಿಕ್ ಬಸ್ಗೆ ಚಾಲನೆ ನೀಡಿದರು.
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನಕ ಕಾರ್ಯದರ್ಶಿ ಕುಮಾರ್ ನಾಯ್ಕ್, ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.