ಬೆಂಗಳೂರು: ‘ಗಾಂಧಿನಗರ ವಾರ್ಡ್ ವ್ಯಾಪ್ತಿಯ ಸ್ವಾತಂತ್ರ್ಯ ಉದ್ಯಾನದ ಬಳಿ ವಾಹನ ನಿಲುಗಡೆ ಸಲುವಾಗಿನಿರ್ಮಿಸುತ್ತಿರುವ ಬಹುಮಹಡಿ (ಎಂಎಲ್ಸಿಪಿ) ಕಟ್ಟಡದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಸೌಕರ್ಯವು ಸೆಪ್ಟೆಂಬರ್ ಅಂತ್ಯದೊಳಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಅವರ ಜೊತೆ ಮುಖ್ಯ ಆಯುಕ್ತರು ಈ ಕಾಮಗಾರಿಯನ್ನು ಮಂಗಳವಾರ ಪರಿಶೀಲನೆ ನಡೆಸಿದರು. ಈ ಕಟ್ಟಡ ಲೋಕಾರ್ಪಣೆಗೊಂಡ ಬಳಿಕ ಗಾಂಧಿನಗರ, ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಾಹನ ನಿಲುಗಡೆ ಸಮಸ್ಯೆ ನೀಗುವ ನಿರೀಕ್ಷೆ ಇದೆ.
‘ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಈ ಕಟ್ಟಡದಲ್ಲಿ ವಾಹನ ನಿಲುಗಡೆ ವ್ಯವಸ್ಥೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ತಳಮಟ್ಟದಿಂದ ಕೆಳಗೆ ಮೂರು ಮಹಡಿಗಳನ್ನು ನಿರ್ಮಿಸಲಾಗಿದೆ.ಕಟ್ಟಡದಲ್ಲಿ 4 ಲಿಫ್ಟ್ಗಳು ಇರಲಿವೆ. 40 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಾಮಗಾರಿ ಸ್ಥಳದಲ್ಲಿ ಭಾರಿ ಗಾತ್ರದ ಬಂಡೆ ಸಿಕ್ಕಿದ ಪರಿಣಾಮ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ (ಯೋಜನೆ ವಿಭಾಗ) ಲೋಕೇಶ್ ಮಾಹಿತಿ ನೀಡಿದರು.
‘ಪ್ರತಿಭಟನೆ ನಡೆಸಲುಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಪ್ರತಿಭಟನೆ ಸ್ಥಳದ ಚಾವಣಿ ಹಾಗೂ ಸೌರ ವಿದ್ಯುತ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ವಿದ್ಯುತ್ ಸಂಪರ್ಕ, ಅಗ್ನಿಶಾಮಕ ವ್ಯವಸ್ಥೆ ಅಳವಡಿಕೆ, ಆವರಣ ಗೋಡೆ ನಿರ್ಮಾಣ, ಪ್ರವೇಶ ದ್ವಾರ, ಪಾದಚಾರಿ ಮಾರ್ಗದ ಕೆಲಸಗಳು ಬಾಕಿ ಇವೆ. ಇವುಗಳನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಈ ಕಟ್ಟಡದ ಹಸಿರೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.
-0-
ಅಂಕಿ ಅಂಶ
₹ 79.81 ಕೋಟಿ
ವಾಹನ ನಿಲುಗಡೆಯಬಹುಮಹಡಿ ಕಟ್ಟಡ ಕಾಮಗಾರಿಯ ಅಂದಾಜು ವೆಚ್ಚ
556
ಕಾರುಗಳ ನಿಲುಗಡೆಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ
445
ದ್ವಿಚಕ್ರ ವಾಹನಗಳ ನಿಲುಗಡೆಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.