ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು, ಅವರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ನಾಲ್ವರು ರಾಷ್ಟ್ರೀಯ ಈಜುಪಟುಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
‘ದೆಹಲಿಯ ರಜತ್ (23), ಶಿವ್ ರಾಣಾ (22), ದೇವ್ ಸರೋಯಿ (25) ಹಾಗೂ ಯೋಗೇಶ್ ಕುಮಾರ್ (26) ಬಂಧಿತರು. ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅಗತ್ಯವಿದ್ದ ತರಬೇತಿ ಪಡೆಯಲೆಂದು ನಗರಕ್ಕೆ ಬಂದಿದ್ದ ಆರೋಪಿಗಳು, ಸಂಜಯನಗರದ 80 ಅಡಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.
‘ಪಶ್ಚಿಮ ಬಂಗಾಳದ ಯುವತಿಯೊಬ್ಬರ ಮೇಲೆ ಮಾರ್ಚ್ 24ರಂದು ಆರೋಪಿಗಳು ಅತ್ಯಾಚಾರ ಎಸಗಿದ್ದರು. ಕೃತ್ಯದ ಬಗ್ಗೆ ಯುವತಿ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
ಊಟಕ್ಕೆ ಕರೆದು ಕೃತ್ಯ: ‘ಎರಡು ವರ್ಷಗಳ ಹಿಂದಷ್ಟೇ ನಗರಕ್ಕೆ ಬಂದಿರುವ ಯುವತಿ, ವಸಂತನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಡೇಟಿಂಗ್ ಆ್ಯಪ್ನಲ್ಲಿ ಖಾತೆ ಹೊಂದಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ರಜತ್, ಆ್ಯಪ್ನಲ್ಲಿ ಯುವತಿಗೆ ರಿಕ್ವೆಸ್ಟ್ ಕಳುಹಿಸಿದ್ದರು. ಅದಕ್ಕೆ ಸ್ವೀಕರಿಸಿದ್ದ ಯುವತಿ, ಚಾಟಿಂಗ್ ಮಾಡಲಾರಂಭಿಸಿದ್ದರು. ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು.’
‘ಹೋಟೆಲ್ನಲ್ಲಿ ಊಟ ಮಾಡೋಣವೆಂದು ಹೇಳಿ ಯುವತಿಯನ್ನು ಮಾರ್ಚ್ 24ರಂದು ರಜತ್ ಸಂಜಯನಗರಕ್ಕೆ ಕರೆಸಿಕೊಂಡಿದ್ದರು. ಯುವತಿ ಸ್ಥಳಕ್ಕೆ ಬರುತ್ತಿದ್ದಂತೆ, ‘ಹೋಟೆಲ್ ಬೇಡ, ಮನೆಯಲ್ಲೇ ಊಟ ಮಾಡೋಣ’ ಎಂದಿದ್ದರು. ಆತನ ಮಾತಿನಂತೆ ಯುವತಿ, ಮನೆಗೆ ಹೋಗಿದ್ದರು. ಅಲ್ಲಿಯೇ ಯುವತಿಗೆ ಇತರೆ ಆರೋಪಿಗಳ ಪರಿಚಯವಾಗಿತ್ತು ’
‘ಯುವತಿ ಹಾಗೂ ಆರೋಪಿಗಳು, ಮದ್ಯ ಸೇವಿಸಿ ಮನೆಯಲ್ಲಿ ಊಟ ಮಾಡಿದ್ದರು. ನಂತರ, ರಜತ್ ಜೊತೆ ಕೊಠಡಿಗೆ ಯುವತಿ ಹೋಗಿದ್ದರು. ಅದೇ ವೇಳೆಯೇ ಅವರ ಮೇಲೆ ರಜತ್ ಅತ್ಯಾಚಾರ ಎಸಗಿದ್ದರು. ಬಳಿಕ, ಮೂವರು ಆರೋಪಿಗಳು ಕೊಠಡಿಗೆ ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಘಟನೆಯಿಂದ ನೊಂದ ಸಂತ್ರಸ್ತೆ, ಆರೋಪಿಗಳಿಂದ ತಪ್ಪಿಸಿಕೊಂಡು ಹೋಗಿ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ನಂತರ ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.