ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಯಪ್ಪನಹಳ್ಳಿಯ ಸರ್ಕಾರಿ ಗೋಮಾಳದ ಕಲ್ಲುಕ್ವಾರಿ ಜಾಗದಲ್ಲಿ ಬಿಬಿಎಂಪಿಯವರು ನಗರದ ಕಸ ತಂದು ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
‘ಬೈಯಪ್ಪನಹಳ್ಳಿಯ ಸರ್ವೆ ನಂ.80ಕ್ಕೆ ಸೇರಿದ ಜಾಗದಲ್ಲಿ ನಗರದ ಬಿಬಿಎಂಪಿ ವ್ಯಾಪ್ತಿಯ ಕಸತಂದು ವಿಲೇವಾರಿ ಮಾಡುತ್ತಿರುವುದರ ಜೊತೆಗೆ ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಬೈಯಪ್ಪನಹಳ್ಳಿ, ಶ್ರೀನಿವಾಸಪುರ, ಮಿಟ್ಟಿಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ದುರ್ವಾಸನೆ ಮತ್ತು ಅಪಾಯಕಾರಿ ಹೊಗೆಯ ಸಮಸ್ಯೆ ಎದುರಿಸಬೇಕಾಗಿದೆ’ ಎಂದು ಮುತ್ತುರಾಜ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಲ್ಲುಕ್ವಾರಿ ಜಾಗದಲ್ಲಿ ಪ್ರತಿನಿತ್ಯ ನೂರಾರು ಲಾರಿಗಳಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಕಳೆದ ವರ್ಷ ವೈಮಾನಿಕ ಪ್ರದರ್ಶನದ ನೆಪವೊಡ್ಡಿ ಈ ಭಾಗದಲ್ಲಿ ಉತ್ಪತ್ತಿಯಾದ ಕಸವನ್ನು ತಾತ್ಕಾಲಿಕವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈಗ ಆದೇಶದಲ್ಲಿ ದಿನಾಂಕ ಬದಲಿಸಿಕೊಂಡು ಅಕ್ರಮವಾಗಿ ಕಸ ತಂದು ಸುರಿಯುವುದನ್ನು ಮುಂದುವರಿಸಿದ್ದಾರೆ. ತಹಶೀಲ್ದಾರ್ ಅವರ ಅನುಮತಿ ಇಲ್ಲದೆ ಕಸವನ್ನು ಸುರಿಯುತ್ತಿರುವ ಕ್ರಮ ನಿಯಮಬಾಹಿರವಾಗಿದೆ. ತಕ್ಷಣ ಕಸ ಸುರಿಯುವುದನ್ನು ಸ್ಥಗಿತಗೊಳಿಸಬೇಕು‘ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.