ADVERTISEMENT

ವೃತ್ತಕ್ಕೆ ಮಧುಕರ್‌ ಶೆಟ್ಟಿ ಹೆಸರಿಡಲು ನಕಾರ

ಬಿಬಿಎಂಪಿ ಪ್ರಸ್ತಾವ ತಿರಸ್ಕರಿಸಿದ ನಗರಾಭಿವೃದ್ಧಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 17:01 IST
Last Updated 24 ಡಿಸೆಂಬರ್ 2020, 17:01 IST
ಡಾ.ಕೆ.ಮಧುಕರ್ ಶೆಟ್ಟಿ
ಡಾ.ಕೆ.ಮಧುಕರ್ ಶೆಟ್ಟಿ   

ಬೆಂಗಳೂರು: ನಗರದ ಹಗಡೂರು ವ್ಯಾಪ್ತಿಯ ವರ್ತೂರು ಕೋಡಿ ವೃತ್ತಕ್ಕೆ ಐಪಿಎಸ್‌ ಅಧಿಕಾರಿ ದಿವಂಗತ ಕೆ. ಮಧುಕರ್‌ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲು ಒಪ್ಪಿಗೆ ಕೋರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಲ್ಲಿಸಿದ್ದ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ.

1999ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಮಧುಕರ್‌ ಶೆಟ್ಟಿ ಅವರು ಹೈದರಾಬಾದ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಸೇವೆಯಲ್ಲಿರುವಾಗಲೇ 2018ರ ಡಿಸೆಂಬರ್‌ನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಹೆಸರನ್ನು ವರ್ತೂರು ಕೋಡಿ ವೃತ್ತಕ್ಕೆ ನಾಮಕರಣ ಮಾಡಬೇಕೆಂಬ ಮನವಿ ಪಾಲಿಕೆಗೆ ಸಲ್ಲಿಕೆಯಾಗಿತ್ತು. ಈ ಕುರಿತು ಪಾಲಿಕೆಯ ಕೌನ್ಸಿಲ್‌ ಸಭೆ 2020ರ ಮಾರ್ಚ್‌ 7ರಂದು ನಿರ್ಣಯ ಅಂಗೀಕರಿಸಿತ್ತು.

ಕೌನ್ಸಿಲ್‌ ಸಭೆಯ ನಿರ್ಣಯದೊಂದಿಗೆ ನಗರಾಭಿವೃದ್ಧಿ ಇಲಾಖೆಗೆ ಸೆಪ್ಟೆಂಬರ್‌ 22ರಂದು ಪ್ರಸ್ತಾವ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತರು, ವೃತ್ತಕ್ಕೆ ಮಧುಕರ್‌ ಶೆಟ್ಟಿ ಅವರ ಹೆಸರಿಡಲು ಅನುಮತಿ ಕೋರಿದ್ದರು. ಡಿಸೆಂಬರ್‌ 15ರಂದು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಸ್ತಾವವನ್ನು ಸರ್ಕಾರ ಒಪ್ಪಿರುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.