ಎಫ್ಐಆರ್
ಬೆಂಗಳೂರು: ಪತಿ ಮತ್ತು ಆತನ ಕುಟುಂಬದ ಸದಸ್ಯರು ಕಿರುಕುಳ ನೀಡುವುದರ ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದು, ಮೂವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಗೂರು ನಿವಾಸಿ 21 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ಯೂನಿಷ್ ಪಾಷಾ, ಮಾವ ಚಾಂದ್ ಪಾಷಾ ಮತ್ತು ಅತ್ತೆ ಷಹೀನ್ ತಾಜ್ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ಆರೋಪಿ ಯೂನಿಷ್ ಪಾಷಾ 2021ರಲ್ಲಿ ದೂರುದಾರೆಯನ್ನು ಮದುವೆ ಆಗಿದ್ದರು. ನಾಲ್ಕು ತಿಂಗಳ ನಂತರ ಯೂನಿಷ್ ಪಾಷಾ, ಚಾಂದ್ ಪಾಷಾ ಮತ್ತು ಷಹೀನ್ ತಾಜ್, ಮಹಿಳೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರು. ಮಹಿಳೆ ಗರ್ಭಿಣಿಯಾಗಿದ್ದ ವೇಳೆ ಪತಿ, ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ ಪರಿಣಾಮ ಆಕೆಗೆ ಗರ್ಭಪಾತ ಆಗಿತ್ತು. ಪ್ರಶ್ನಿಸಿದ್ದಾಗ ಆಯುಧ ತೋರಿಸಿ ಬೆದರಿಕೆ ಹಾಕಿದ್ದ. ಅಲ್ಲದೇ ಮಹಿಳೆಯ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘2023ರಲ್ಲಿ ಆರೋಪಿ ಮಹಿಳೆ ಮೇಲೆ ಮತ್ತೆ ಹಲ್ಲೆ ಮಾಡಿದ್ದ. ಪತಿಯ ಮನೆ ಬಿಟ್ಟು ಮಹಿಳೆ ತವರು ಮನೆ ಸೇರಿದ್ದರು. ಜೂನ್ 4ರಂದು ಮಹಿಳೆ ಬಟ್ಟೆಗಳನ್ನು ತೆಗೆದುಕೊಳ್ಳಲು ಆರೋಪಿಯ ಮನೆಗೆ ಹೋದಾಗ ಚಾಕು ತೋರಿಸಿ, ನಿನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ’ ಎಂದು ಮಹಿಳೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಡಿ.ಜಿಗೆ ಪತ್ರ: ಈ ಸಂಬಂಧ ಡಿ.ಜಿ ಮತ್ತು ಐಜಿಪಿ, ನಗರ ಪೊಲೀಸ್ ಕಮಿಷನರ್, ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.