ADVERTISEMENT

Bengaluru Rains | ಬಿರುಸಿನ ಮಳೆ: ಮನೆಗಳಿಗೆ ನುಗ್ಗಿದ ನೀರು

ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕು * ತಾಸುಗಟ್ಟಲೆ ಕಾದ ವಾಹನಗಳು

​ಪ್ರಜಾವಾಣಿ ವಾರ್ತೆ
Published 18 ಮೇ 2025, 0:28 IST
Last Updated 18 ಮೇ 2025, 0:28 IST
ನಗರದ ಎಂ.ಜಿ. ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಮಳೆ ನೀರು ನಿಂತು ಕಾಲುವೆಯಂತಾಗಿದ್ದ ರಸ್ತೆಯನ್ನು ದಾಟುತ್ತಿರುವ ಜನರು
ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌
ನಗರದ ಎಂ.ಜಿ. ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಮಳೆ ನೀರು ನಿಂತು ಕಾಲುವೆಯಂತಾಗಿದ್ದ ರಸ್ತೆಯನ್ನು ದಾಟುತ್ತಿರುವ ಜನರು ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌   

ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಬಿರುಸಿನಿಂದ ಮಳೆಯಾಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಹಲವೆಡೆ ನೀರು ರಸ್ತೆಯಲ್ಲೇ ಹರಿದಿದೆ. ಇದರಿಂದ ವಾಹನ ಸರಾಗ ಸಂಚಾರಕ್ಕೆ ತೊಡಕುಂಟಾಯಿತು. ಕೆಲವು ಬಡಾವಣೆಗಳಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದೆ.

ಬಾಣಸವಾಡಿ ಮತ್ತು ಇಂದಿರಾನಗರದಲ್ಲಿ ಮರ ಮುರಿದು ಬಿದ್ದಿದೆ. ಯಾರಿಗೂ ಜೀವಾಪಾಯ ಉಂಟಾಗಿಲ್ಲ. ಪುಟ್ಟೇಣಹಳ್ಳಿಯಲ್ಲಿ ವೆಂಕಟಾದ್ರಿ ಅಪಾರ್ಟ್‌ಮೆಂಟ್‌ನ ಆವರಣಗೋಡೆ ಕುಸಿದಿದೆ. ಸಾಯಿ ಲೇಔಟ್‌ನಲ್ಲಿ ಮನೆಗಳು ಜಲಾವೃತಗೊಂಡವು. ಬನ್ನೇರುಘಟ್ಟೆ ರಸ್ತೆಯ ಮೈಕೋ ಲೇಔಟ್‌ನಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ.

ರೆಸಿಡೆನ್ಸಿ ರಸ್ತೆ, ಯಶವಂತಪುರ ರಸ್ತೆಗಳಲ್ಲಿ ವಾಹನಗಳು ತಾಸುಗಟ್ಟಲೆ ನಿಲ್ಲುವಂತಾಯಿತು. ಕೆ.ಆರ್‌. ವೃತ್ತದಲ್ಲಿ ನೀರು ನಿಂತಿದ್ದರಿಂದ ಪೊಲೀಸ್ ಕಾರ್ನರ್ ಜಂಕ್ಷನ್ ಕಡೆಗೆ ವಾಹನ ಸಂಚಾರ ನಿಧಾನಗತಿಯಾಗಿತ್ತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಾರಕ್ಕಿ ಮೆಟ್ರೊದಿಂದ (ಪುನೀತ್ ರಾಜ್‌ಕುಮಾರ್ ರಸ್ತೆ) ಬನ್ನೇರುಘಟ್ಟ ರಸ್ತೆ ಕಡೆಗೆ, ರಾಮಮೂರ್ತಿ ನಗರದಿಂದ ಟಿನ್ ಫ್ಯಾಕ್ಟರಿ ಕಡೆಗೆ, ಕೋರಮಂಗಲದಿಂದ ದೊಮ್ಮಲೂರು ಮೇಲ್ಸೇತುವೆ ಕಡೆಗೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ADVERTISEMENT

ಇದೇ ರೀತಿ ಎಚ್‌ಎಸ್‌ಬಿಸಿ ಜಂಕ್ಷನ್, ಜಿ.ಡಿ. ಮಾರಾ ಜಂಕ್ಷನ್, ಮಾನ್ಯತಾ ಟೆಕ್‌ಪಾರ್ಕ್, ಆಡುಗೋಡಿ, ಹುಳಿಮಾವು ಗೇಟ್, ಅನಿಲ್ ಕುಂಬ್ಳೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ವಸಂತ ನಗರ, ಖೋಡೆ ವೃತ್ತ, ಐಟಿಪಿಎಲ್ ಮುಖ್ಯ ರಸ್ತೆಯ ಹೂಡಿ, ಇಬ್ಬಲೂರು ಜಂಕ್ಷನ್, ಬನಶಂಕರಿ, ವಿದ್ಯಾಶಿಲ್ಪ ಸರ್ವಿಸ್ ರಸ್ತೆ, ಎಎಸ್‌ಸಿ ಜಂಕ್ಷನ್, ಅಯೋಧ್ಯ ಜಂಕ್ಷನ್, ಟ್ಯಾನರಿ ರಸ್ತೆ, ವೀರಣ್ಣಪಾಳ್ಯ ಜಂಕ್ಷನ್, ಕಮರ್ಷಿಯಲ್ ಸ್ಟ್ರೀಟ್, ಆನೆಪಾಳ್ಯ, ಹೋಪ್‌ಫಾರ್ಮ್ ಸಿಗ್ನಲ್, ವೈಟ್‌ಫೀಲ್ಡ್, ವಿಂಡ್ಸನ್ ಮ್ಯಾನರ್ ರೈಲ್ವೆ ಸೇತುವೆ ಬಳಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಜೆ ಪಿ ನಗರ, ಶ್ರೀನಿವಾಗಿಲು, ಗೋಪಾಲನ್ ಮಾಲ್, ಮೇಖ್ರಿ ವೃತ್ತದ ಕೆಳ ಸೇತುವೆ, ಎಂ.ಎಸ್‌. ಪಾಳ್ಯ, ಕಲ್ಯಾಣ ನಗರ, ಪಣತ್ತೂರು, ದೇವರ ಬೀಸನಹಳ್ಳಿ, ಜೆ.ಬಿ. ನಗರ. ಗುಂಜೂರು, ಹುಣಸಮಾರನಹಳ್ಳಿ ಸರ್ವೀಸ್‌ ರಸ್ತೆ, ಹೆಬ್ಬಾಳ, ವೀರಣ್ಣ ಪಾಳ್ಯ ಸಹಿತ ಹಲವೆಡೆ ರಸ್ತೆ ಮೇಲೆ ನೀರು ಹರಿದಿದೆ. 

ಬ್ರಿಗೇಡ್ ರಸ್ತೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್

ಕಂಟ್ರೋಲ್‌ ರೂಂಗೆ ಭೇಟಿ

ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಅವರು ಶನಿವಾರ ರಾತ್ರಿ ಕಂಟ್ರೋಲ್‌ ರೂಂಗೆ ಭೇಟಿ ನೀಡಿ ಮಳೆಯಿಂದ ಉಂಟಾದ ಅನಾಹುತಗಳ ಬಗ್ಗೆ ಮಾಹಿತಿ ಪಡೆದರು. ಮುರಿದು ಬಿದ್ದ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮೆಜೆಸ್ಟಿಕ್ ಬಳಿ ಶನಿವಾರ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ

ಸಂಚಾರ ದಟ್ಟಣೆ: ಪರದಾಟ

ಭಾರಿ ಮಳೆಯಿಂದ ನಗರದ ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಜೆಸ್ಟಿಕ್‌ ರಾಜಾಜಿನಗರ ಯಶವಂತಪುರ ಗೊರಗುಂಟೆಪಾಳ್ಯ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ದೀಪಾಂಜಲಿನಗರ ಕೆಂಗೇರಿ ಭಾಗದಲ್ಲಿ ಸಂಚಾರದ ದಟ್ಟಣೆ ಉಂಟಾಗಿತ್ತು. ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿದ್ದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲತ್ತ ನೈಟ್‌ ರೈಡರ್ಸ್‌ ತಂಡಗಳ ನಡುವೆ ಶನಿವಾರ ಐಪಿಎಲ್‌ ಪಂದ್ಯ ವೀಕ್ಷಣೆಗೆಂದು ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಸೇರಿದ್ದರು. ಸಂಜೆ ವೇಳೆಗೆ ಜೋರು ಮಳೆ ಆರಂಭವಾಗಿದ್ದರಿಂದ ಕ್ರೀಡಾಂಗಣದ ಸುತ್ತಮುತ್ತ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ರಾಜಕುಮಾರ್ ರಸ್ತೆಯಲ್ಲಿ ಮಳೆಯ ನೀರಿನಲ್ಲೇ ವಾಹನ ಸವಾರರು ಸಾಗಿದರು  ಪ್ರಜಾವಾಣಿ ಚಿತ್ರ

ಮುರಿದು ಬಿದ್ದ 8 ಮರ 20 ಟೊಂಗೆ

ಶನಿವಾರ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ 8 ಮರಗಳು 20 ಟೊನ್ಗೆಗಳು ಮುರಿದು ಬಿದ್ದಿವೆ. 4 ಮರ ಹಾಗೂ 10 ಟೊನ್ಗೆಗಳನ್ನು ರಾತ್ರಿಯೇ ತೆರವುಗೊಳಿಸಲಾಗಿದೆ. ಉಳಿದವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಾಜಿನಗರದಲ್ಲಿ ಮಳೆಯಲ್ಲೇ ಸಾಗಿದ ವಾಹನ ಸವಾರರು ಪ್ರಜಾವಾಣಿ ಚಿತ್ರ
ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದ್ದ ಐಪಿಎಲ್‌ ಕ್ರಿಕೆಟ್‌ ನೋಡಲು ಬಂದು ಮಳೆಯಲ್ಲಿ ಸಿಲುಕಿದ್ದ ಜನರು ಕಬ್ಬನ್‌ ‍ಪಾರ್ಕ್‌ ರಸ್ತೆಯಲ್ಲಿ ಕಾಯುತ್ತಿರುವುದು. ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.