ADVERTISEMENT

ಹೆಸರಘಟ್ಟ: ಸೈನಿಕ ಹುಳಗಳಿಗೆ ಕಂಗಾಲಾದ ರೈತರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:12 IST
Last Updated 16 ಜುಲೈ 2019, 19:12 IST
ಮೆಕ್ಕೆಜೋಳದಲ್ಲಿರುವ ಸೈನಿಕ ಹುಳು
ಮೆಕ್ಕೆಜೋಳದಲ್ಲಿರುವ ಸೈನಿಕ ಹುಳು   

ಹೆಸರಘಟ್ಟ: ಹೋಬಳಿಯಲ್ಲಿ ಮೆಕ್ಕೆಜೋಳದ ಹೊಲಗಳಲ್ಲಿ ಸೈನಿಕ ಹುಳ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.

'ಸೀರೆಸಂದ್ರ ಮತ್ತು ಬ್ಯಾತ ಗ್ರಾಮದಲ್ಲಿ 112 ಎಕರೆಯಲ್ಲಿ ಮೆಕ್ಕೆಜೋಳನು ಬೆಳೆಯಲಾಗಿತ್ತು. ಒಂದು ವಾರದೊಳಗೆ ಹುಳಗಳು ಬೆಳೆಯನ್ನು ನಾಶಪಡಿಸಿದವು. ರೈತರು ಸಾವಿರಾರು ರೂಪಾಯಿಗಳ ನಷ್ಟ ಅನುಭವಿಸಿದರು’ ಎಂದು ಸೀರೆಸಂದ್ರ ಗ್ರಾಮದ ರೈತ ನಾಗರಾಜ್ ಹೇಳಿದರು.

‘ಲಭ್ಯವಿರುವ ಔಷಧಿಗಳನ್ನು ತಂದು ಸಿಂಪಡಿಸಿದರೂ ಹುಳಗಳು ಹತೋಟಿಗೆ ಬರುತ್ತಿಲ್ಲ. ಒಂದು ದಿನಕ್ಕೆ ಒಂದು ಹುಳು 800ರಷ್ಟು ಮೊಟ್ಟೆಗಳನ್ನು ಇಡುತ್ತದೆ. ಒಂದು ಕಡೆ ಔಷಧಿಯನ್ನು ಸಿಂಪಡಿಸಿ ಬಂದರೆ, ಮತ್ತೊಂದು ಕಡೆಯಿಂದ ಅವು ಜನ್ಮ ತಾಳಿ ಬೆಳೆಯನ್ನು ಹಾಳುಗೆಡವುತ್ತಿವೆ’ ಎನ್ನುತ್ತಾರೆ ಬ್ಯಾತ ಗ್ರಾಮದ ರೈತ ಕೃಷ್ಣಪ್ಪ.

ADVERTISEMENT

‘ಹೆಸರಘಟ್ಟ ಹೋಬಳಿಯಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ಮೆಕ್ಕೆಜೋಳವು ರೈತರ ಪಾಲಿಗೆ ಒಂದಿಷ್ಟು ಆದಾಯವನ್ನು ತರುವ ಬೆಳೆ. ಇಂಥ ಬೆಳೆಯು ಈ ಸಾರಿ ರೈತರ ಕೈಗೆ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸೊಣೇನಹಳ್ಳಿ ರೈತ ರಂಗಪ್ಪ ಅಳಲು ತೋಡಿಕೊಂಡರು.

‘ಐದಾರು ತಿಂಗಳ ಹಿಂದೆ ಸೀರೆಸಂದ್ರ ಮತ್ತು ಬ್ಯಾತ ಗ್ರಾಮದಲ್ಲಿ ಈ ಹುಳಗಳು ಕಾಣಿಸಿಕೊಂಡಿತ್ತು. ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಎಚ್ಚರಿಕೆಯನ್ನು ಕೊಟ್ಟಿದ್ದರೆ ಸಾಕಷ್ಟು ಬೆಳೆಗಳನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಚನ್ನಸಂದ್ರ ಗ್ರಾಮದ ನಿವಾಸಿ ಅರುಣ್ ಕುಮಾರ್ ಹೇಳಿದರು.

ಹೆಸರಘಟ್ಟ ಕೃಷಿ ಅಧಿಕಾರಿ ಅರುಣಾ ಪ್ರತಿಕ್ರಿಯಿಸಿ, ‘ಹೋಬಳಿಯಲ್ಲಿ ಸೈನಿಕ ಹುಳಗಳು ಕಾಣಿಸಿಕೊಂಡಿದ್ದು, ಅವುಗಳ ನಿಯಂತ್ರಣಕ್ಕೆ ಅನೇಕ ಔಷಧಿಗಳನ್ನು ಸರಬರಾಜು ಮಾಡಲಾಗಿದೆ. ಕೃಷಿ ಇಲಾಖೆ ಕೇಂದ್ರದಲ್ಲಿ ಅವುಗಳು ಲಭ್ಯವಿದ್ದು, ರೈತರು ಪಹಣಿಯನ್ನು ತೋರಿಸಿ ಪಡೆದು ಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.