ಬೆಂಗಳೂರು: ‘ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರೊಬ್ಬರ ಮೇಲೆ ಬೇಹುಗಾರಿಕೆ ನಡೆಸಿದ ಆರೋಪಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಶುಕ್ರವಾರ ಎಚ್ಚರಿಸಿದೆ.
ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ಕೇಂದ್ರ ವಲಯ ಐಜಿಪಿ ಶರತ್ಚಂದ್ರ ಅವರು, ಈ ಕುರಿತ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.
‘ರಾಜ್ಯ ಗುಪ್ತದಳಕ್ಕೆ ಸೇರಿದ ತುಮಕೂರಿನ ಇನ್ಸ್ಪೆಕ್ಟರ್ ಆಫ್ ಪೋಲಿಸ್ ಮತ್ತು ಇಬ್ಬರು ಮುಖ್ಯ ಕಾನ್ಸ್ಟೆಬಲ್ಗಳು ಕರೆ ಮಾಡಿ ಅರ್ಜಿದಾರರಿಗೆ ಮಾಹಿತಿ ಕೇಳಿದ್ದಾರೆ. 2019ರ ಆಗಸ್ಟ್ 27ರಂದು ಈ ಕರೆ ಮಾಡಲಾಗಿದೆ’ ಎಂಬ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಫೋನ್ ಮಾಡಿ ಅರ್ಜಿದಾರರಿಗೆ ಏಕೆ ಕೇಳಬೇಕಿತ್ತು, ಸರ್ಕಾರದ ಇಲಾಖೆಯಿಂದಲೇ ಪಡೆಯಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿತು.
‘ಕರೆ ಮಾಡಿದ್ದ ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆಗೆ ಈ ಬಗ್ಗೆ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಬೇಕು. ಭವಿಷ್ಯದಲ್ಲಿ ಪೊಲೀಸರಿಂದ ಇಂತಹ ವರ್ತನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.