ADVERTISEMENT

ಮರಣ ಪ್ರಮಾಣಪತ್ರ ಗೊಂದಲ ಪರಿಹರಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 21:20 IST
Last Updated 4 ಆಗಸ್ಟ್ 2020, 21:20 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು:ಸಾಂಕ್ರಾಮಿಕ ರೋಗದ ಸಮಯದಲ್ಲಿ ಮರಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಇರುವ ಗೊಂದಲಗಳನ್ನು ಪರಿಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಮರಣ ಪ್ರಮಾಣ ಪತ್ರದಲ್ಲಿ ಅನಗತ್ಯವಾಗಿ ಕೋವಿಡ್ ಎಂದು ನಮೂದಿಸಬಾರದು. ಆದರೆ, ರಾಜ್ಯ ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಬಿಬಿಎಂಪಿ ನಡೆದುಕೊಳ್ಳುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

‘ಕೊರೊನಾ ಸೋಂಕಿನಿಂದ ಸತ್ತವರಿಗೆ ಮಾತ್ರ ಕೋವಿಡ್ ಎಂದು ನಮೂದಿಸಬೇಕು.ರಸ್ತೆ ಅಪಘಾತದಲ್ಲಿ ಸತ್ತವರ ಮರಣೋತ್ತರ ಪರೀಕ್ಷೆ ಬಳಿಕ ಕೋವಿಡ್ ಇರುವುದು ದೃಢಪಟ್ಟರೆ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್ ಎಂದು ನಮೂದಿಸಲಾಗುತ್ತಿದೆ. ‌ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ತಿಳಿಸಿತು.

ADVERTISEMENT

ವಿಮಾ ಮೊತ್ತ ಹೆಚ್ಚಿಸಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ಸಮನಾಗಿ ಪೌರಕಾರ್ಮಿಕರ ವಿಮಾ ಮೊತ್ತವನ್ನೂ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.

‘ತಜ್ಞರ ಸಮಿತಿ ಕಾರ್ಯ ವಿಧಾನಗಳ ವಿವರ ಒದಗಿಸಿ’

ಕೋವಿಡ್ ಆಸ್ಪತ್ರೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ನೇಮಿಸಿರುವ ತಜ್ಞರ ಸಮಿತಿಯ ಕಾರ್ಯ ವಿಧಾನಗಳ ವಿವರ ಸಲ್ಲಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಪೀಠ ನಿರ್ದೇಶನ ನೀಡಿತು.

‘ಸೋಂಕಿತರಿಗೆ ಲಭ್ಯ ಇರುವ ಸಾರಿಗೆ ವ್ಯವಸ್ಥೆ, ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿದೆಯೇ, ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ರಾಜ್ಯ ಮಟ್ಟದ ತಜ್ಞರ ಸಮಿತಿ ಪರಿಶೀಲಿಸಬೇಕಿದೆ. ಅದಕ್ಕಾಗಿಯೇ ಸಮಿತಿಯಲ್ಲಿ ಬೇರೆ ಕ್ಷೇತ್ರಗಳ ಪರಿಣಿತರನ್ನು ನೇಮಿಸಬೇಕು ಎಂದು ಪದೇ ಪದೇ ನಾವು ಹೇಳುತ್ತಿದ್ದೇವೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.