ಬೆಂಗಳೂರು: ‘ಯುವ ವಕೀಲರಿಗೆ ವೃತ್ತಿಯ ಆರಂಭದಲ್ಲಿ 24 ತಿಂಗಳವರೆಗೆ ನೀಡಲಾಗುತ್ತಿರುವ ₹ 2 ಸಾವಿರ ಸ್ಟೈಪೆಂಡ್ ಮೊತ್ತವನ್ನು ₹ 5 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ನಡೆದ ಕಾನೂನು ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ಈ ಕುರಿತ ಬೇಡಿಕೆ ಪರಿಶೀಲಿಸಲಾಗುವುದು ಎಂದು ಹೇಳಿದರು.
‘ಎಸ್.ಸಿ, ಎಸ್.ಟಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಹಾಗೂ ಟಿ.ಎಸ್.ಪಿ (ಬುಡಕಟ್ಟು ಉಪ ಯೋಜನೆ) ಯೋಜನೆಯಡಿ ಅನುದಾನ ಸಹಿತ ಮತ್ತು ಸರ್ಕಾರಿ ಕಾನೂನು ಕಾಲೇಜುಗಳ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಈ ಯೋಜನೆಯನ್ನು ಖಾಸಗಿ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಉದ್ದೇಶವಿದೆ’ ಎಂದು ತಿಳಿಸಿದರು.
ಇದೇ ವೇಳೆ, ‘ಹೈಕೋರ್ಟ್ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಿ’ ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೇಮಕ: ಕಳೆದ ಒಂದೂವರೆ ವರ್ಷದಿಂದ ‘ರೀಸರ್ಚ್ ಲಾ ಆಂಡ್ ಆರ್ಡರ್ ಇನ್ಸ್ಟಿಟ್ಯೂಟ್’ಗೆ ಮುಖ್ಯಸ್ಥರ ನೇಮಕಾತಿ ಆಗಿಲ್ಲ. ಶೀಘ್ರವೇ ಈ ಸ್ಥಾನ ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂತೆಯೇ ಸರ್ಕಾರದ ವತಿಯಿಂದ ನೇಮಕಗೊಳ್ಳುವ ‘ಪ್ರಿನ್ಸಿಪಲ್ ಗವರ್ನಮೆಂಟ್ ಅಡ್ವೋಕೇಟ್’ ನೇಮಕಕ್ಕೂ ಗಮನಹರಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.