ಬೆಂಗಳೂರು: ಶಬ್ನಮ್ ಡೆವಲಪರ್ಸ್ ಶೂಟೌಟ್ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
‘ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷ್ಯವೇ ಇಲ್ಲ. ಕಳೆದ 8 ತಿಂಗಳಿಂದ ಬಂಧನದಲ್ಲಿದ್ದರೂ ವಿಚಾರಣಾ ಪ್ರಕ್ರಿಯೆಗಳು ಆರಂಭವಾಗಿಲ್ಲ. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಇತರ ಮೂವರನ್ನು ಸೆಷನ್ ಕೋರ್ಟ್ ದೋಷಮುಕ್ತಗೊಳಿಸಿದೆ’ ಎಂದು ರವಿ ಪೂಜಾರಿ ಪರ ವಕೀಲರು ವಾದಿಸಿದರು.
‘26 ವರ್ಷಗಳಿಂದ ತಲೆಮರೆಸಿಕೊಂಡಿದ್ದರವಿ ಪೂಜಾರಿಯನ್ನು ವಿದೇಶದಲ್ಲಿ ಬಂಧಿಸಿ ಕರೆತರಲಾಗಿದೆ. ಆತನ ವಿರುದ್ಧ ದಾಖಲಾಗಿರುವ 108 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಾಮೀನು ನೀಡಿದರೆ ಮತ್ತೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ಕುಮಾರ್, ‘ಬೇರೆ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂಬ ಕಾರಣಕ್ಕೆ ರವಿ ಪೂಜಾರಿ ವಿರುದ್ಧ ಸಾಕ್ಷ್ಯಗಳಿಲ್ಲ ಅಥವಾ ಆತ ದೋಷಿ ಅಲ್ಲ ಎಂದು ನಿರ್ಣಯಿಸಲು ಆಗುವುದಿಲ್ಲ. ಆತನ ವಿರುದ್ಧ ಹಲವು ಪ್ರಕರಣಗಳು ಬಾಕಿ ಇವೆ. ಜಾಮೀನು ನೀಡಿದರೆ ನಿಯಮಿತವಾಗಿ ವಿಚಾರಣೆಗೆ ಹಾಜರಾಗುವ ಬಗ್ಗೆ ಖಾತ್ರಿ ಇಲ್ಲ’ ಎಂದು ಅಭಿಪ್ರಾಯಿಸಿದರು. ಜಾಮೀನು ಅರ್ಜಿ ತಿರಸ್ಕರಿಸಿದ ಪೀಠ, ವಿಚಾರಣೆ ಚುರುಕುಗೊಳಿಸುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ತಿಲಕ್ ನಗರದಲ್ಲಿನ ಶಬ್ನಮ್ ಡೆವಲಪರ್ಸ್ ಕಚೇರಿಯಲ್ಲಿ 2007ರಲ್ಲಿ ನಡೆದಿದ್ದ ಶೂಟೌಟ್ನಲ್ಲಿ ಇಬ್ಬರು ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.