ADVERTISEMENT

ಜೀವಾವಧಿ ಶಿಕ್ಷೆ ಮಾರ್ಪಾಡು: ಪತ್ನಿ ಕೊಂದ ಪತಿ ಬಿಡುಗಡೆ- ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 5:59 IST
Last Updated 18 ಅಕ್ಟೋಬರ್ 2022, 5:59 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ‘ಹಬ್ಬದ ದಿನ ಅಡುಗೆ ಮಾಡಿಲ್ಲ’ ಎಂದು ಕುಪಿತಗೊಂಡು ಪತ್ನಿ ಕೊಲೆ ಮಾಡಿದ್ದ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಮಾರ್ಪಾಡು ಮಾಡಿದೆ. ‘ಅಪರಾಧಿ ಈಗಾಗಲೇ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿರುವ ಕಾರಣಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿ’ ಎಂದು ಆದೇಶಿಸಿದೆ.

‘ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎಂಬುದನ್ನು ಸಾಕ್ಷ್ಯಗಳು ದೃಢಪಡಿಸುತ್ತಿವೆ. ಇಬ್ಬರು ಮಕ್ಕಳ ತಾಯಿಯಾಗಿದ್ದ ಆಕೆ ಮನೆ ಕೆಲಸ ಮಾಡುತ್ತಿರಲಿಲ್ಲ. ಗೌರಿಗಣೇಶ ಹಬ್ಬದ ದಿನ ಅಡುಗೆ ಮಾಡಿಲ್ಲ, ಮಕ್ಕಳಿಗೆ ಊಟ ಕೊಟ್ಟಿಲ್ಲ. ಪಾನಮತ್ತಳಾಗಿ ಮಲಗಿದ್ದಾಳೆ ಎಂದು ಕೋಪಗೊಂಡ ಪತಿ ದಿಢೀರ್ ಆವೇಶದಲ್ಲಿ ಆಕೆಗೆ ದೊಣ್ಣೆಯಿಂದ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಪತಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂಬುದು ಕಂಡುಬಂದಿದೆ. ಹಾಗಾಗಿ, ಇದು ಉದ್ದೇಶಪೂರ್ವಕವಲ್ಲದ ನರ ಹತ್ಯೆ ಎಂದೇ ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸುರೇಶ ಎಂಬುವರುಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವ ಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಅಪರಾಧಿಯ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ಇಲ್ಲದಿದ್ದರೆ ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸಿ’ ಎಂದು ಆದೇಶಿಸಿದೆ.

ADVERTISEMENT

2016ರಲ್ಲಿ ಸುರೇಶ ಪತ್ನಿಯನ್ನು ದೊಣ್ಣೆಯಿಂದ ಹೊಡೆದಿದ್ದರು. ವಿಚಾರಣಾ ನ್ಯಾಯಾಲಯ 2017ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಆಟೊ ಕಳವು ಆರೋಪಿ ಬಂಧನ

ಬೆಂಗಳೂರು: ಸರಕು ಸಾಗಣೆ ಆಟೊ ಕಳವು ಮಾಡಿದ್ದ ಮೊಹಮ್ಮದ್‌ ಅಜರ್‌ (29) ಎಂಬ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿ, ಕದ್ದ ಹಣ್ಣುಗಳು ಮತ್ತು ಸರಕು ಸಾಗಣೆ ಆಟೊ ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಜರ್‌ ರಸ್ತೆಬದಿ ನಿಲ್ಲಿಸುತ್ತಿದ್ದ ತಳ್ಳು ಗಾಡಿಗಳಲ್ಲಿದ್ದ ಹಣ್ಣುಗಳ ಬುಟ್ಟಿಗಳನ್ನು ಕಳವು ಮಾಡುತ್ತಿದ್ದ. ಕಳವು ಮಾಡಿದ ಹಣ್ಣು ಸಾಗಿಸಲು ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಗೂಡ್ಸ್‌ ಆಟೊ ಕಳವು ಮಾಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.