ಬೆಂಗಳೂರು: ಎಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸರಿಗೆ ವಾರದ ರಜೆಯ ಜೊತೆಗೆ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ದಿನದಂದೂ ನಿಶ್ಚಿತವಾಗಿ ರಜೆ ಸಿಗಲಿದೆ.
ಠಾಣೆಯ ನೋಟಿಸ್ ಫಲಕದಲ್ಲಿ ಪತ್ರವೊಂದನ್ನು ಪ್ರದರ್ಶಿಸಿರುವ ಇನ್ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ, ರಜೆಯ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ಸ್ಪೆಕ್ಟರ್ ಅವರ ತೀರ್ಮಾನಕ್ಕೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
‘ಯಾವಾಗಲೂ ಬಿಡುವಿಲ್ಲದ ಕೆಲಸದಲ್ಲಿ ನಮ್ಮನ್ನು ನಾವು ಮರೆತಿರುತ್ತೇವೆ. ನಮಗೂ ಒಂದು ಕುಟುಂಬವಿದೆ, ಅವರಿಗೂ ನಾವು ಸಮಯ ನೀಡಬೇಕು ಎಂಬುದನ್ನು ಮರೆತು ಹಗಲಿರುಳು ಕೆಲಸ ಮಾಡುತ್ತಿರುತ್ತೇವೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ನಮ್ಮಿಂದ ಆಗುತ್ತಿಲ್ಲ. ಇನ್ನುಮುಂದೆ ಆ ದಿನಗಳಂದು ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಈ ಮೂಲಕ ಸೂಚಿಸುತ್ತೇನೆ’ ಎಂದು ಇನ್ಸ್ಪೆಕ್ಟರ್ ಪತ್ರದಲ್ಲಿ ತಿಳಿಸಿದ್ದಾರೆ.
‘ಈ ನಿಶ್ಚಿತ ರಜೆಯಿಂದ ನೀವೆಲ್ಲರೂ ವೃತ್ತಿ ಜೀವನದಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುವಂತಾಗಲಿ ಎಂಬುದು ನನ್ನ ಆಶಯ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.