ಮದುವೆ
(ಐಸ್ಟೋಕ್ ಚಿತ್ರ)
ಬೆಂಗಳೂರು: ಪ್ರೀತಿಸಿ ಮದುವೆಯಾದ ಬಳಿಕ ಸಂಸಾರಕ್ಕೆ ಹೊಸ ಮನೆ ಮಾಡುವುದಾಗಿ ಹಣ, ಚಿನ್ನ ಪಡೆದು ಪರಾರಿಯಾಗಿರುವ ಪತಿ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
ಮದುವೆಯಾದ ಮೂರೇ ತಿಂಗಳಿಗೆ ಪತಿ ಹೇಮಂತ್ ತನ್ನನ್ನು ತೊರೆದು ಹೋಗಿದ್ದು, ನ್ಯಾಯ ಕೊಡಿಸುವಂತೆ ಸಂತ್ರಸ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕುಣಿಗಲ್ ಮೂಲದ ಸಂತ್ರಸ್ತೆ, ನಗರದ ಮಾಲ್ವೊಂದರಲ್ಲಿ ಕೆಲಸ ಮಾಡುವ ವೇಳೆ ಹೇಮಂತ್ ಪರಿಚಯವಾಗಿ ಪರಸ್ಪರ ಪ್ರೀತಿಸಿ ಫೆಬ್ರುವರಿಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಸ್ನೇಹಿತನ ಕೊಠಡಿಯಲ್ಲಿ ಇಬ್ಬರೂ ಸಂಸಾರ ನಡೆಸುತ್ತಿದ್ದರು. ‘ಹೊಸ ಮನೆ ಮಾಡುವುದಾಗಿ ಹಣ ಮತ್ತು ಚಿನ್ನ ಪಡೆದಿದ್ದ ಹೇಮಂತ್, ತನ್ನನ್ನು ಗರ್ಭಿಣಿ ಮಾಡಿ ಈಗ ‘ ಚಾರಿತ್ರ್ಯ ಸರಿ ಇಲ್ಲ’ ಎಂದು ದೂರ ಮಾಡಿದ್ದಾನೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಹೇಮಂತ್ ಕುಟುಂಬದವರು ಸಹ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಪತಿ ಜೊತೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.