ADVERTISEMENT

‘ಸೀಟು ಹಂಚಿಕೆಗೆ ಶೀಘ್ರವೇ ಮಾತುಕತೆ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:08 IST
Last Updated 7 ನವೆಂಬರ್ 2018, 20:08 IST

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಜತೆ ಶೀಘ್ರವೇ ಮಾತುಕತೆ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಈಗಾಗಲೇ ಮೂರು ಕ್ಷೇತ್ರಗಳ ಸೀಟು ಹಂಚಿಕೆ ಆಗಿದೆ, ಉಳಿದ ಕ್ಷೇತ್ರಗಳಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

2019 ರ ಲೋಕಸಭಾ ಚುನಾವಣೆಗೆ ಮಧುಬಂಗಾರಪ್ಪ ಅವರೇ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ. ಉಪ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸೋತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್‌ ನೆರವಿನಿಂದ ಶಿವಮೊಗ್ಗವನ್ನು ಗೆಲ್ಲುತ್ತೇವೆಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುಂದಿನ ಚುನಾವಣೆಗೆ ಈಗಿನಿಂದಲೇ ಎರಡೂ ಪಕ್ಷಗಳು ಜೊತೆಯಾಗಿ ತಯಾರಿ ನಡೆಸುತ್ತೇವೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿರುವುದು ನಮಗೆ ಎಚ್ಚರಿಕೆ ಗಂಟೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ವಿಶ್ವನಾಥ್‌
ಹೇಳಿದರು.

ಮಧುಬಂಗಾರಪ್ಪ ವಿಧಾನಪರಿಷತ್‌ ಸದಸ್ಯರಾಗಿ ಮಂತ್ರಿಯಾಗಲು ಒಪ್ಪಿಲ್ಲ. ಆದ್ದರಿಂದ ಅವರಿಗೆ ಸರ್ಕಾರದ ಮಟ್ಟದಲ್ಲಿ ಪ್ರಭಾವಿ ಹುದ್ದೆಯನ್ನು ನೀಡಲು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.