ADVERTISEMENT

ಸ್ವಾತಂತ್ರ್ಯದ ಅಮೃತ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಐಸಿಸಿಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 1:59 IST
Last Updated 2 ಅಕ್ಟೋಬರ್ 2021, 1:59 IST

ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಐಸಿಸಿಸಿ) ಯೋಜನೆಯನ್ನು ಕಾರ್ಯಗತಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಕಸದಿಂದ ಮುಕ್ತಿ, ಸಂಚಾರ ದಟ್ಟನೆಯಿಂದ ಮುಕ್ತಿ ಹಾಗೂ ಮಾಲಿನ್ಯದಿಂದ ಮುಕ್ತಿ ಎಂಬ ಮೂರು ಪರಿಕಲ್ಪನೆಗಳಡಿ ಐಸಿಸಿಸಿ ಕಾರ್ಯನಿರ್ವಹಿಸಲಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಶುಕ್ರವಾರ ಈ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಕಂಡುಕೊಳ್ಳಲು ಈ ಯೋಜನೆಯಡಿ ಏಕೀಕೃತ ವ್ಯವಸ್ಥೆ ಒದಗಿಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ ಇದೇ 3 ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.3ರವರೆಗೆ 75 ಗಂಟೆಗಳ ಮ್ಯಾರಥಾನ್ ಹಮ್ಮಿಕೊಂಡಿದ್ದೇವೆ. ಶಾಂತಿನಗರ ಮುಖ್ಯ ರಸ್ತೆಯನ್ನು ನಿಧಾನಗತಿಯ ಬೀದಿ ಎಂಬ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಿದ್ದೇವೆ. ಸೂಚನಾ ಫಲಕಗಳಿರುವ ಮತ್ತು ಪಾದಚಾರಿ ಸ್ನೇಹಿ, ಸಂಚಾರ ಸ್ನೇಹಿಯಾದ ರಸ್ತೆ ನಿರ್ಮಾಣ ಮಾಡುವುದು ಹಾಗೂ ಜನರು ಪರಸ್ಪರ ಬೆರೆಯುವುದಕ್ಕೆ ಅನುಕೂಲ ಕಲ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಸೌಕರ್ಯ ಕಲ್ಪಿಸುವುದು ಇದರ ಉದ್ದೇಶ’ ಎಂದರು.

ADVERTISEMENT

‘ಅಕ್ಕಿತಿಮ್ಮನಹಳ್ಳಿ ಮತ್ತು ಅಯ್ಯಪ್ಪ ಗಾರ್ಡನ್ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕೆ.ಆರ್ ಮಾರುಕಟ್ಟೆ ಹಾಗೂ ಬಾಲಭವನದ ಬಳಿ ಜನ ಸೇರುವುದಕ್ಕೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.