ಬೆಂಗಳೂರು:'ಮಿತ್ರ ಮಂಡಳಿಯಲ್ಲಿರುವ (ಬಿಜಿಪಿಗೆ ಬಂದ ಶಾಸಕರು) ಎಲ್ಲರೂ ಒಂದೆರಡು ದಿನಗಳಲ್ಲಿ ಒಟ್ಟಿಗೆ ಸೇರುತ್ತೇವೆ. ಬೇಕಿದ್ದರೆ ನಾನೇ ಅದರ ನೇತೃತ್ವ ವಹಿಸುತ್ತೇನೆ. ಕಾದು ನೋಡಿ. ಹೋಟೆಲ್ನಲ್ಲಿ ಸೇರಿ ನಮ್ಮ ಒಗ್ಗಟ್ಟು ತೋರಿಸುತ್ತೇವೆ' ಎಂದು ಯೋಜನೆ ಮತ್ತು ಸಾಂಖ್ಯಿಕ. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ವಿಶ್ವನಾಥ್ ಅವರನ್ನು ಕೈಬಿಟ್ಟಿಲ್ಲ. ಕೋರ್ಟ್ನಲ್ಲಿ ಕಾನೂನು ತೊಡಕು ಇದೆ. ನಾನಂತೂ ಅವರ ಜೊತೆ ಇದ್ದೇನೆ, ಎಲ್ಲರೂ ಅವರವರ ಖಾತೆಯಲ್ಲಿ ಬ್ಯುಸಿಯಾಗಿದ್ದಾರೆ' ಎಂದರು.
'ಖಾತೆಯಲ್ಲಿ ಒಳ್ಳೆ ಖಾತೆ, ಕೆಟ್ಟ ಖಾತೆ ಎಂದು ಏನೂ ಇಲ್ಲ. ಎಲ್ಲವೂ ಒಳ್ಳೆಯ ಖಾತೆಗಳೇ' ಎಂದೂ ಹೇಳಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಮೇಲೆ ಸಿ.ಪಿ. ಯೋಗೇಶ್ವರ್ ಆಸಕ್ತಿ ಇರುವ ಬಗ್ಗೆ ಕೇಳಿದಾಗ, 'ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾಯಿಸಲು ಸಾಧ್ಯನೇ ಇಲ್ಲ. ನಾನು ಅನುಮತಿ ಕೊಡದೆ ಹೇಗೆ ಬದಲಾವಣೆ ಮಾಡುತ್ತಾರೆ. ಅವರೇನು ಮಂಡ್ಯದಿಂದ ಗೆದ್ದು ಬಂದಿದ್ದಾರೆಯೇ. ಅಲ್ಲಿ ಗೆದ್ದಿರುವುದು ನಾನು. ಅವರಿಗ್ಯಾಕೆ ಮಂಡ್ಯ ಜಿಲ್ಲೆ ಉಸ್ತುವಾರಿ ಕೊಡುತ್ತಾರೆ' ಎಂದು ಪ್ರಶ್ನಿಸಿದರು.
'ಸಚಿವ ಸಿ.ಪಿ.ಯೋಗೇಶ್ವರ್ ನಮ್ಮ ಜಿಲ್ಲೆಗೆ ಕಾಫಿ, ಊಟಕ್ಕೆ ಬರಲಿ. ಪರಸ್ಪರ ನಮ್ಮ ಇಲಾಖೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ' ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸ್ಥಾನ ಬಿಟ್ಟುಕೊಡಲ್ಲ' ಎಂದು ನೇರವಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.