ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಇದಕ್ಕೆ ಕಾರಣವಾದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ದೋಷಾರೋಪ ನಿಗದಿಗೆ ಅನುಮತಿ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಾಂಗ್ರೆಸ್ನ ಟಿ.ಬಿ. ಜಯಚಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಪರವಾಗಿ ವಿಧಾನಸಭೆಯಲ್ಲಿ ಶುಕ್ರವಾರ ಉತ್ತರ ನೀಡಿದ ಅವರು, ‘ಆರೋಪಗಳ ಕುರಿತು ತನಿಖೆಗೆ ತಂಡವೊಂದನ್ನು ನೇಮಿಸಲಾಗಿದೆ. 571 ಕಾಮಗಾರಿಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಪೈಕಿ 183 ಕಾಮಗಾರಿಗಳ ಪರಿಶೀಲನೆ ನಡೆಸಿದ್ದು, 25 ಅನರ್ಹ ಗುತ್ತಿಗೆದಾರರಿಗೆ 69 ಕಾಮಗಾರಿಗಳ ಗುತ್ತಿಗೆ ನೀಡಿ, ಕಾರ್ಯಾದೇಶ ಹೊರಡಿಸಿರುವುದು ಪತ್ತೆಯಾಗಿದೆ’ ಎಂದರು.
ಟೆಂಡರ್ ಪ್ರಕ್ರಿಯೆ ನಡೆಯುವಾಗ ಕಾರ್ಯಪಾಲಕ ಎಂಜಿನಿಯರ್ ಹುದ್ದೆಯಲ್ಲಿದ್ದ ಎಸ್. ರವೀಶ್ ತಪ್ಪೆಸಗಿರುವುದು ಕಂಡುಬಂದಿದೆ. ಅವರು ನಿವೃತ್ತರಾಗಿದ್ದಾರೆ. ರವೀಶ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದಕ್ಕೂ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ವಿಷಯ ಪ್ರಸ್ತಾಪಿಸಿ ಮಾತನಾಡಿದ ಜಯಚಂದ್ರ, ‘ಗುತ್ತಿಗೆದಾರರೇ ಅಲ್ಲದವರಿಗೆ ಜೆಜೆಎಂ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಪೈಪ್ ಪೂರೈಕೆದಾರರು, ಮಾನವ ಸಂಪನ್ಮೂಲ ಒದಗಿಸುವವರಿಗೂ ಜೆಜೆಎಂ ಕಾಮಗಾರಿಯ ಟೆಂಡರ್ ನೀಡಲಾಗಿದೆ. ವಾರ್ಷಿಕ ವಹಿವಾಟಿನ ದಾಖಲೆ ಆಧಾರದಲ್ಲಿ ಇವೆಲ್ಲವೂ ನಡೆದಿದೆ. ಈ ಅಕ್ರಮಕ್ಕೆ ಕಾರಣವಾದ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಎರಡು ಬಾರಿ ವರ್ಗಾವಣೆ ಮಾಡಿದರೂ ಮರಳಿ ಅದೇ ಹುದ್ದೆಗೆ ಬಂದಿದ್ದರು. ನಂತರ ನಿವೃತ್ತರಾದರು’ ಎಂದರು.
‘ತುಮಕೂರು ಜಿಲ್ಲೆಯಲ್ಲಿ 2,528 ಕಾಮಗಾರಿಗಳಿಗೆ ಟೆಂಡರ್ ನಡೆಸಲಾಗಿದೆ. ಎಲ್ಲ ಟೆಂಡರ್ಗಳಲ್ಲೂ ಅಕ್ರಮ ನಡೆದಿದೆ. ಒಂದು ಕಡೆಯೂ ಕೆಲಸ ಪೂರ್ಣಗೊಂಡಿಲ್ಲ. ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ. ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ಕಾಂಗ್ರೆಸ್ನ ಜೆ.ಟಿ.ಪಾಟೀಲ, ‘ಈ ಕುರಿತು ಅಂದಾಜು ಸಮಿತಿಯಲ್ಲಿ ಚರ್ಚೆಯಾಗಿದೆ. ಲೋಕಾಯುಕ್ತ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಲಾಗಿದೆ’ ಎಂದರು.
‘ಅಧಿಕಾರಿಗಳ ತಂಡವು ಈಗಾಗಲೇ ತನಿಖೆ ನಡೆಸುತ್ತಿದೆ. ಈಗ ಲೋಕಾಯುಕ್ತ ತನಿಖೆಗೆ ವಹಿಸಿದರೆ ವಿಳಂಬವಾಗುತ್ತದೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.