ADVERTISEMENT

ದೀಪ ಬೆಳಗಿ ಪ್ರತಿಭಟಿಸಲು ಐಎಂಎ ಕರೆ

ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ವೈದ್ಯರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 20:13 IST
Last Updated 21 ಆಗಸ್ಟ್ 2020, 20:13 IST

ಬೆಂಗಳೂರು: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ, ಪ್ರತಿಭಟನೆ ರೂಪದಲ್ಲಿ ಇದೇ ಭಾನುವಾರ ರಾತ್ರಿ 8 ಗಂಟೆಗೆ ಎಲ್ಲರೂ ದೀಪ ಬೆಳಗಬೇಕು ಎಂದು ಕರೆ ನೀಡಿದೆ.

ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಸೇವೆಗೆ ಹಾಜರಾಗಿದ್ದ ವೈದ್ಯರು, ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕುಎಂದು ಒತ್ತಾಯಿಸಿದ್ದಾರೆ.

‘ಡಾ. ನಾಗೇಂದ್ರ ಅವರು ಕರ್ತವ್ಯವೇ ಮೊದಲು ಎಂಬ ತತ್ವವನ್ನು ಪಾಲಿಸಿ,‌ ಸತತ ದುಡಿಯುತ್ತಿದ್ದರು. ಅವರ ಆತ್ಮಹತ್ಯೆ ನಿಜಕ್ಕೂ ‌ದಿಗ್ಭ್ರಮೆ ಮೂಡಿಸಿದೆ. ನಿರಂತರ‌ ಒತ್ತಡ ಹಾಗೂ ಅತ್ಯಂತ ‌ಸಂಕೀರ್ಣ ವ್ಯವಸ್ಥೆಯ ನಡುವೆ‌ ಸೇವೆ ಸಲ್ಲಿಸುತ್ತಿರುವ ಅವರನ್ನು ಕಳೆದು‌ಕೊಂಡಿರುವುದು ವಿಷಾದನೀಯ.ಈ ರೀತಿಯ‌ ಅನಾಹುತಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸರ್ಕಾರವು ‌ವೈದ್ಯರನ್ನು ಬೆದರಿಸುವ, ಕಾನೂನಿನ‌‌ ಗುಮ್ಮ ತೋರಿಸುವುದನ್ನು‌ ಬಿಟ್ಟು, ಸೌಹಾರ್ದಯುತವಾಗಿ ನಡೆಸಿಕೊಳ್ಳಬೇಕು. ಈ ಘಟನೆಗೆ ಕಾರಣವಾದವರನ್ನು ಕೂಡಲೇ ಶಿಕ್ಷಿಸಬೇಕು’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಆಗ್ರಹಿಸಿದ್ದಾರೆ.

ADVERTISEMENT

‘ಈ ರೀತಿ ಘಟನೆಗಳು ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸಲಿದೆ. ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಹಾಗೂ ಮೇಲಧಿಕಾರಿಗಳ ಒತ್ತಡ ನಡೆಯುತ್ತಲೇ ಇದೆ.ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿ ಘಟನೆಗಳು ಆಘಾತವನ್ನು ಉಂಟುಮಾಡುತ್ತಿವೆ. ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಒದಗಿಸುವ ಜತೆಗೆ ಅನಗತ್ಯವಾಗಿ ಒತ್ತಡ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಸಂಘದ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.