ADVERTISEMENT

ಅರಣ್ಯ ಪ್ರದೇಶ ಪುನರ್ಜನ್ಮಕ್ಕೆ ‘ವೃಕ್ಷ ಬೇಸಾಯ’

ಇಂಡಿಯನ್‌ ಕೌನ್ಸಿಲ್‌ ಫಾರೆಸ್ಟ್ರಿ ಎಜುಕೇಷನ್‌ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:39 IST
Last Updated 3 ಡಿಸೆಂಬರ್ 2018, 19:39 IST
ಸಿದ್ಧಾಂತ್‌ ದಾಸ್ ಮೊಬೈಲ್ ಆ್ಯಪ್‌ ಬಿಡುಗಡೆ ಮಾಡಿದರು (ಎಡದಿಂದ ಮೂರನೆಯವರು). ವೋಲ್ವೊ ವ್ಯವಸ್ಥಾಪಕ ನಿರ್ದೇಶಕ ಕಮಲ್‌ ಬಾಲಿ, ಸುರೇಶ್ ಚಂದ್ರ ಗೈರೋಲಾ, ಪಿ. ಶ್ರೀಧರ್, ಕೆ.ಕೆ.ಪಾಂಡೆ ಇದ್ದರು –ಪ್ರಜಾವಾಣಿ ಚಿತ್ರ
ಸಿದ್ಧಾಂತ್‌ ದಾಸ್ ಮೊಬೈಲ್ ಆ್ಯಪ್‌ ಬಿಡುಗಡೆ ಮಾಡಿದರು (ಎಡದಿಂದ ಮೂರನೆಯವರು). ವೋಲ್ವೊ ವ್ಯವಸ್ಥಾಪಕ ನಿರ್ದೇಶಕ ಕಮಲ್‌ ಬಾಲಿ, ಸುರೇಶ್ ಚಂದ್ರ ಗೈರೋಲಾ, ಪಿ. ಶ್ರೀಧರ್, ಕೆ.ಕೆ.ಪಾಂಡೆ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಾಶವಾಗಿರುವ ಅರಣ್ಯ ಪ್ರದೇಶಕ್ಕೆ ಪುನರ್ಜನ್ಮ ನೀಡುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಇಂಡಿಯನ್‌ ಕೌನ್ಸಿಲ್‌ ಫಾರೆಸ್ಟ್ರಿ ಎಜುಕೇಷನ್‌ ವತಿಯಿಂದ ‘ವೃಕ್ಷ ಬೇಸಾಯ’ಕ್ಕೆ ಮುಂದಡಿ ಇಡಲಾಗಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಕ್ಯಾಂಪಸ್‌ನಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಆಯೋಜಿಸಿದ್ದ 14ನೇ ರಾಷ್ಟ್ರೀಯ ಸಿಲ್ವಿಕಲ್ಚರ್‌ (ವೃಕ್ಷ ಬೇಸಾಯ) ಸಮ್ಮೇಳನದಲ್ಲಿ ಕೇಂದ್ರ ಅರಣ್ಯ ಇಲಾಖೆಯ ಮಹಾ ನಿರ್ದೇಶಕ ಸಿದ್ಧಾಂತ್‌ ದಾಸ್‌ ಮಾಹಿತಿ ನೀಡಿದರು.

‘ನಗರೀಕರಣ ಮತ್ತು ಕೈಗಾರೀಕರಣ ಹೆಚ್ಚಾಗಿ ಕಾಡು ಈಗ ಕೈಗೆ ಸಿಗದಷ್ಟು ನಾಶವಾಗಿದೆ. ಕಾಡಿನಲ್ಲಿರುವ ಸಾವಿರಾರು ಮರಗಳು ನೂರಾರು ರೋಗಗಳಿಗೆ ತುತ್ತಾಗಿ ಒಣಗುತ್ತಿವೆ. ಕಾಡು ಪ್ರಾಣಿಗಳು ನೆಲೆ ಕಂಡುಕೊಳ್ಳಲು ನಗರ ಮತ್ತು ಗ್ರಾಮೀಣದತ್ತ ಧಾವಿಸುತ್ತಿವೆ. ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಹೆಚ್ಚಾಗುತ್ತಿದ್ದು, ಆಮ್ಲಜನಕ ಕ್ಷೀಣಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್‌, ‘ಕಾಡಿನಲ್ಲಿ ರೋಗಗಳಿಗೆ ತುತ್ತಾದ ಮರಗಳನ್ನು ಪತ್ತೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಾಡಿನ ವಾತಾವರಣಕ್ಕೆ ತಕ್ಕಂತೆ ಬೆಳೆಯುವ ಮರಗಳನ್ನು ‌ನೆಡಲು ಕ್ರಮ ಕೈಗೊಳ್ಳಲಾಗುತ್ತದೆ. ರೋಗ ಹರಡದಂತೆ ಎಚ್ಚರವನ್ನೂ ವಹಿಸಲಾಗುತ್ತದೆ' ಎಂದು ತಿಳಿಸಿದರು.

ಮೊಬೈಲ್‌ ಆ್ಯಪ್‌ ಬಿಡುಗಡೆ

ಕೊಯಮತ್ತೂರಿನ ಐಎಫ್‌ಜಿಟಿಬಿ ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಡಿಸೀಸ್‌ ಮ್ಯಾನೇಜ್‌ಮೆಂಟ್‌ ಇನ್‌ ನರ್ಸರಿ ಅಂಡ್‌ ಪ್ಲಾಂಟೇಷನ್‌’ ಮೊಬೈಲ್‌ ಅಪ್ಲಿಕೇಷನ್‌ ಬಿಡುಗಡೆ ಮಾಡಲಾಯಿತು. ಶ್ರೀಗಂಧ, ರೋಸ್‌ವುಡ್ ಮತ್ತು ಮಹಾಗನಿಯಂತಹ ಬೆಳೆಬಾಳುವ ಮರಗಳ ಸಂರಕ್ಷಿಸಲು ಈ ಸಂಸ್ಥೆ ಸಂಶೋಧನೆ ನಡೆಸಿದೆ.

ಮನೆಯ ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮರಗಳು ಅಥವಾ ಗಿಡಗಳಲ್ಲಿರುವ ಎಲೆಗಳು ರೋಗಗಳಿಗೆ ತುತ್ತಾಗಿದ್ದರೆ ಅದರ ಭಾವಚಿತ್ರವನ್ನು ಈ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಮರಗಳನ್ನು ಸಂರಕ್ಷಿಸಲು ‘ಇ–ಪ್ರೊಟೆಕ್ಷನ್‌’ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.