ADVERTISEMENT

ಕಠಿಣ ವಜ್ರವನ್ನೂ ಬಾಗಿಸಬಹುದು: ಪ್ರೊ.ಸುಬ್ರ ಸುರೇಶ್‌

ಸಂಶೋಧನೆಯನ್ನು ವಿವರಿಸಿದ ಹಿರಿಯ ವಸ್ತುವಿಜ್ಞಾನ ತಜ್ಞ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 4:09 IST
Last Updated 4 ಜನವರಿ 2020, 4:09 IST
   
""

ಬೆಂಗಳೂರು: ಅತ್ಯಂತ ಕಠಿಣ ವಜ್ರವನ್ನೂ ಬಾಗಿಸಬಹುದು, ಇದರಿಂದ ವಿದ್ಯುನ್ಮಾನ ಕ್ಷೇತ್ರ ಮಾತ್ರವಲ್ಲ ಆರೋಗ್ಯ ಕ್ಷೇತ್ರದಲ್ಲೂ ಕ್ರಾಂತಿಯನ್ನೇ ಮಾಡಬಹುದು ಎಂದು ಹಿರಿಯ ವಸ್ತುವಿಜ್ಞಾನ ತಜ್ಞ ಹಾಗೂಸಿಂಗಪುರದನಿನ್ಯಂಗ್‌ ತಾಂತ್ರಿಕ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ.ಸುಬ್ರ ಸುರೇಶ್‌ ಹೇಳಿದರು.

107ನೇ ವಿಜ್ಞಾನ ಕಾಂಗ್ರೆಸ್‌ನಲ್ಲಿ ಶುಕ್ರವಾರ ಸಾರ್ವಜನಿಕ ಉಪನ್ಯಾಸ ನೀಡಿದ ಅವರು, ‘ಸಿಂಥೆಟಿಕ್‌ವಜ್ರವನ್ನು ನ್ಯಾನೊ ಸ್ಕೇಲ್‌ನಲ್ಲಿ (80 ನ್ಯಾನೊ ಮೀಟರ್‌ ಅಂದರೆ ತಲೆಗೂದಲಿನ ಒಂದು ಸಾವಿರದ ಒಂದು ಭಾಗದಷ್ಟು ಚಿಕ್ಕಗಾತ್ರ)ಸೂಜಿ ತಯಾರಿಸಿ ಅದರ ಮೇಲೆ ಒತ್ತಡ ಹಾಕಿದಾಗ ಶೇ 90 ರಷ್ಟು ಬಾಗಿದ್ದನ್ನು ನನ್ನ ತಂಡದ ಸಂಶೋಧನೆ ಕಂಡುಕೊಂಡಿದೆ. ಚೀನಾ ಇದನ್ನೇ ಇನ್ನಷ್ಟು ಸುಧಾರಿಸಿ, ನಿಜವಾದ ವಜ್ರವನ್ನೇ ಪ್ರಯೋಗಕ್ಕೆ ಒಳಪಡಿಸಿಶೇ 93ರಷ್ಟು ಬಾಗಿಸಿದ್ದಾಗಿ ಹೇಳಿ ಕೊಂಡಿದೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಬಹು ದೊಡ್ಡ ಸಾಧನೆ’ ಎಂದರು.

‘ವಜ್ರ ಅತ್ಯಂತ ಶ್ರೇಷ್ಠ ಸೆಮಿಕಂಡಕ್ಟರ್‌ ವಸ್ತು. ಏಕೆಂದರೆ ಈಗ ಎಲೆಕ್ಟ್ರಾನಿಕ್ಸ್‌ನಲ್ಲಿ ಬಳಸುತ್ತಿ ರುವ ಸಿಲಿಕಾನ್‌ಗಿಂತ ಇದು ಭಾರಿ ಪರಿ ಣಾಮಕಾರಿ. ಸಿಲಿಕಾನ್‌ ಸೆಲ್‌, ಆಪ್ಟೊ ಎಲೆಕ್ಟ್ರಾನಿಕ್ಸ್‌ಗಳಂತಹ ಕ್ಷೇತ್ರಗಳಲ್ಲಿ ಇದು ಭವಿಷ್ಯದಲ್ಲಿ ಬಹಳ ದೊಡ್ಡ ಪಾತ್ರ ವಹಿಸಲಿದೆ. ವಜ್ರ ಕಠಿಣ, ಅದನ್ನು ಪಳ ಗಿಸುವುದು ಅಸಾಧ್ಯ ಎಂಬ ಕಾರಣಕ್ಕೆ ಇದುವರೆಗೆ ಅದನ್ನು ಕಡೆಗಣಿಸಲಾಗಿತ್ತು’ ಎಂದು ಸುಬ್ರ ಸುರೇಶ್‌ ವಿವರಿಸಿದರು.

ADVERTISEMENT

ವಜ್ರದ ನ್ಯಾನೊ ಗಾತ್ರದ ಕಾರಣಕ್ಕೇ ಅದರ ಸ್ವಭಾವ ಬದಲಾಗುವುದು ಸಾಧ್ಯವಾಗಿದೆ. ನ್ಯಾನೊ ತಂತ್ರಜ್ಞಾನದ ಈ ಸಂಶೋಧನೆಯ ಫಲ ಭವಿಷ್ಯದಲ್ಲಿ ಮನುಕುಲಕ್ಕೆ ಸಿಗುವುದು ನಿಶ್ಚಿತ ಎಂದರು.

4ನೇ ಕೈಗಾರಿಕಾ ಕ್ರಾಂತಿ: ‘ನಾವು ಇಂದು ನಾಲ್ಕನೇ ಹಂತದ ಕೈಗಾರಿಕಾ ಕ್ರಾಂತಿಯ ಯುಗದಲ್ಲಿದ್ದೇವೆ. ಈ ಹಿಂದೆ ಮೊಬೈಲ್‌ ಫೋನ್‌ 5 ಕೋಟಿ ಜನರನ್ನು ತಲುಪಲು 75 ವರ್ಷ ಹಿಡಿದಿತ್ತು. ಎಟಿಎಂ 18 ವರ್ಷ, ಕಂಪ್ಯೂಟರ್‌ 14 ವರ್ಷ, ಇಂಟರ್‌ನೆಟ್‌ 7 ವರ್ಷ, ಫೇಸ್‌ಬುಕ್‌ 4 ವರ್ಷ ತೆಗೆದುಕೊಂಡಿತ್ತು. ಆದರೆ ವಿ ಚ್ಯಾಟ್‌ ಕೇವಲ 1 ವರ್ಷದಲ್ಲಿ ಹಾಗೂ ಪೊಕೆಮನ್‌ ಗೊ 19 ದಿನದಲ್ಲಿ 5 ಕೋಟಿ ಜನರನ್ನು ತಲುಪಿದೆ. ಜಗತ್ತು ಇಷ್ಟು ವೇಗವಾಗಿ ಕೈಗಾರಿಕಾ ಕ್ರಾಂತಿಗೆ ಒಳಪಡುತ್ತಿದ್ದು, ಇಲ್ಲಿನ ಸವಾಲುಗಳು ಇದುವರೆಗೆ ಸುಲಭವಾಗಿ ಪರಿಹಾರಗೊಳ್ಳದೆ ಹೋಗಿದ್ದವು, ಇನ್ನು ಮುಂದೆ ಅದಕ್ಕೆ ತ್ವರಿತ ಪರಿಹಾರ ದೊರಕಲೇ ಬೇಕಾಗುತ್ತದೆ, ಹೀಗಾಗಿ ಇಂತಹ ಸಂಶೋಧನೆಗಳ ಬಳಕೆ ಮುಂದಿನ ದಿನಗಳಲ್ಲಿ ಸಮರ್ಥವಾಗಿ ನಡೆಯುವ ವಿಶ್ವಾಸ ಇದೆ’ ಎಂದರು. ಪ್ರೊ.ಕೆ.ಭೈರಪ್ಪ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಂ.ತಿಮ್ಮಯ್ಯ ಸಹ ಅಧ್ಯಕ್ಷರಾಗಿದ್ದರು.

ಮಲೇರಿಯಾ, ಸಿಕೆಲ್‌ ಸಿಲ್‌ಗೆ ಪರಿಹಾರದ ಆಶಾಕಿರಣ
ಚೆನ್ನೈ ಸಹಿತ ದೇಶದ ಹಲವೆಡೆ ಸಿಕೆಲ್‌ ಸೆಲ್‌ ಕಾಯಿಲೆಯಿಂದ ಬಳಲುತ್ತಿರುವ ಹಲವರನ್ನು ಪ್ರೊ.ಸುಬ್ರ ಸುರೇಶ್ ನೋಡಿದ್ದಾರೆ. ಕೆಂಪು ರಕ್ತಕಣಗಳಲ್ಲಿನ ನ್ಯೂನತೆಯಿಂದಲೇ ಈ ಕಾಯಿಲೆ ಬರುತ್ತದೆ. ಸೆರೆಬ್ರಲ್ ಮಲೇರಿಯಾಕ್ಕೂ ಬಹುತೇಕ ಇದುವೇ ಕಾರಣ. ರಕ್ತಕಣಕ್ಕೆ ಔಷಧ ಪೂರೈಸುವಲ್ಲಿ ಪರಿಣಾಮಕಾರಿ ಸಾಧನ ಬಳಸಿದರೆಕಾಯಿಲೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು ಎಂದು ಸುಬ್ರ ಸುರೇಶ್‌ ಪ್ರತಿಪಾದಿಸಿದರು.

ಮಂಡಿ ಚಿಪ್ಪು ಸಮಸ್ಯೆಗೂ ಪರಿಹಾರ
ಮಂಡಿ ಚಿಪ್ಪು ಬದಲಾವಣೆ ಹೆಚ್ಚು ಹೆಚ್ಚುನಡೆಯುತ್ತಿರುತ್ತದೆ. ಚಿಪ್ಪಿನಲ್ಲಿ ಸೂಕ್ಷ್ಮ ಉಪಕರಣ ಬಳಸಿ ಮೊಬೈಲ್‌ಗೆ ಅದರ
ಸಂದೇಶ ರವಾನೆಯಾಗುವಂತೆ ಮಾಡಿದರೆ, ಚಿಪ್ಪು ಹೊಂದಿಕೊಳ್ಳುತ್ತದೆಯೋ, ಇಲ್ಲವೋ ಎಂಬುದು ಗೊತ್ತಾಗುತ್ತದೆ. ಬಾಗುವ
ವಜ್ರದ ಸೂಜಿಯಿಂದ ತಯಾರಿಸಿದಉಪಕರಣವನ್ನು ಇಲ್ಲಿ ಬಳಸಿಕೊಳ್ಳುವುದೂ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.