ADVERTISEMENT

ಐಪಿಎಸ್ ಶ್ರೇಣಿಯವರಲ್ಲದ ಅಧಿಕಾರಿಗಳಿಗೆ ಬಡ್ತಿಯಲ್ಲಿ ಅನ್ಯಾಯ: ಪತ್ರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 20:10 IST
Last Updated 25 ಜನವರಿ 2022, 20:10 IST

ಬೆಂಗಳೂರು: ‘ಬಡ್ತಿ ನೀಡುವ ವಿಚಾರದಲ್ಲಿ ಐಪಿಎಸ್ ಶ್ರೇಣಿಯವರಲ್ಲದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ರಾಜ್ಯ ಪೊಲೀಸ್ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ನಾನ್ ಐಪಿಎಸ್‌ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು 15 ದಿನದೊಳಗೆ ಸರಿಪಡಿಸಬೇಕು‘ ಎಂದು ಸಂಘದ ಅಧ್ಯಕ್ಷ ಎಂ. ಯೋಗೇಶ್ ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿ 57 ‍ಐಪಿಎಸ್ ಹಾಗೂ 109 ಐಪಿಎಸ್ ಶ್ರೇಣಿಯವರಲ್ಲದವರಿಗೆ ಮೀಸಲಾದ ಹುದ್ದೆಗಳು ಮಂಜೂರಾಗಿವೆ. ಈ ಹುದ್ದೆಗಳಿಗೆ ಬಡ್ತಿ ನೀಡುವ ಸಂದರ್ಭದಲ್ಲಿ, ಐಪಿಎಸ್‌ಗಳಿಗೆ ಮೀಸಲಿರುವ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಸ್ಥಳೀಯ ಕನ್ನಡಿಗರಾದ ಐಪಿಎಸ್ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ’ ಎಂದೂ ಪತ್ರದಲ್ಲಿ ದೂರಿದ್ದಾರೆ.

ADVERTISEMENT

‘ಐಪಿಎಸ್‌ ಶ್ರೇಣಿಯವರಲ್ಲದ ಅಧಿಕಾರಿಗಳು ಇದ್ದರೂ, ಅವರಿಗಾಗಿ ಇರುವ ಹುದ್ದೆಗಳಿಗೆ ಐಪಿಎಸ್‌ ಅಧಿಕಾರಿಗಳನ್ನು ನೇಮಿಸುವುದು ಸರಿಯಲ್ಲ. ಇಂಥ ಹುದ್ದೆಗಳಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಆ ಹುದ್ದೆಗಳಿಗೆ ಐಪಿಎಸ್ ಶ್ರೇಣಿಯವರಲ್ಲದ ಅಧಿಕಾರಿಗಳನ್ನು ಭರ್ತಿ ಮಾಡಬೇಕು’ ಎಂದೂ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೂ ಪತ್ರದ ಪ್ರತಿ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.