ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂಬ ವಿಚಾರ ಇಲಾಖೆಯ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.
ಅಮೃತಹಳ್ಳಿ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ಹಾಗೂ ಅವ್ಯವಹಾರ ಆರೋಪ ಸಂಬಂಧ ಅಮೃತಹಳ್ಳಿ ಪ್ರದೇಶದ ಸಮಾಜ ಚಿಂತಕರು ಹೆಸರಿನಲ್ಲಿ ಮುಖ್ಯಮಂತ್ರಿಗೆ ದೂರು ಸಲ್ಲಿಕೆಯಾಗಿತ್ತು.
ಈ ದೂರಿನ ಅನ್ವಯ ಯಲಹಂಕ ಉಪವಿಭಾಗದ ಎಸಿಪಿ ನಡೆಸಿದ ಆಂತರಿಕ ತನಿಖೆಯಲ್ಲಿ, ಇನ್ಸ್ಪೆಕ್ಟರ್ ಅಂಬರೀಶ್ ವಿರುದ್ಧ ನೀಡಿದ ದೂರಿನಲ್ಲಿ ಸತ್ಯಾಂಶವಿಲ್ಲ. ದುರುದ್ದೇಶಪೂರಕವಾಗಿ ಅನಾಮಧೇಯರ ಹೆಸರಿನಲ್ಲಿ ದೂರು ನೀಡಿರುವುದು ಕಂಡು ಬಂದಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ತನಿಖೆ ಪೂರ್ಣಗೊಳಿಸಿರುವ ಎಸಿಪಿ ಅವರು, ಈಶಾನ್ಯ ವಿಭಾಗದ ಡಿಸಿಪಿಗೆ ವರದಿ ಸಲ್ಲಿಸಿದ್ದಾರೆ.
‘ಇನ್ಸ್ಪೆಕ್ಟರ್ ವಿರುದ್ಧ ದೂರು ನೀಡಿದವರು ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಜತೆಗೆ, ಅವರ ಹೆಸರು ಹಾಗೂ ವಿಳಾಸ ನೀಡಿಲ್ಲ. ಹೀಗಾಗಿ, ಸರ್ಕಾರದ ಸುತ್ತೋಲೆಯಂತೆ ದೂರು ಅರ್ಜಿ ಮುಕ್ತಾಯಗೊಳಿಸುವಂತೆ’ ಡಿಸಿಪಿಗೆ ಎಸಿಪಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಡ್ರಗ್ಸ್ ದಂಧೆಕೋರರ ಪಿತೂರಿ: ಎರಡು ವರ್ಷಗಳ ಅವಧಿಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಗಳು ಸೇರಿ 44 ಮಂದಿಯನ್ನು ಬಂಧಿಸಲಾಗಿದೆ. ₹4.29 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.
ಈ ಪೈಕಿ ಅರ್ಧ ಕ್ವಿಂಟಲ್ ಗಾಂಜಾ, ಎಂಡಿಎಂಎ ಸೇರಿ ಇತರ ಡ್ರಗ್ಸ್ ಕೂಡ ಸೇರಿದೆ. ಡ್ರಗ್ಸ್ ದಂಧೆ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದ್ದರಿಂದ ದಂಧೆಕೋರರೇ ಅಧಿಕಾರಿ ವಿರುದ್ಧ ಅನಾಮಧೇಯರ ಹೆಸರಿನಲ್ಲಿ ಸುಳ್ಳು ದೂರು ನೀಡಿರುವ ಸಾಧ್ಯತೆಯಿದೆ. ದೂರಿನ ಹಿಂದೆ ಯಾರ ಕೈವಾಡವಿದೆ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.