ADVERTISEMENT

ರಂಧ್ರ ಕೊರೆವ ಯಂತ್ರ, ಟ್ಯಾಂಕರ್ ಜಪ್ತಿ

ಬೆಳ್ಳಹಳ್ಳಿ ಕ್ರಾಸ್ ಸಮೀಪ ಅನಧಿಕೃತವಾಗಿ ರಸ್ತೆ ಕತ್ತರಿಸಿ ಕೇಬಲ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 19:57 IST
Last Updated 30 ನವೆಂಬರ್ 2019, 19:57 IST
ರಸ್ತೆ ಕೊರೆದು ಕೇಬಲ್ ಅಳವಡಿಸುತಿದ್ದ ಯಂತ್ರವನ್ನು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್ (ಎಡಗಡೆಯವರು) ಜಪ್ತಿ ಮಾಡಿದರು. ಮುಖ್ಯ ಎಂಜಿನಿಯರ್ ಎಸ್.ಪಿ ರಂಗನಾಥ್ ಮತ್ತು ಪಾಲಿಕೆ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್ ಇದ್ದರು  -ಪ್ರಜಾವಾಣಿ ಚಿತ್ರ
ರಸ್ತೆ ಕೊರೆದು ಕೇಬಲ್ ಅಳವಡಿಸುತಿದ್ದ ಯಂತ್ರವನ್ನು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್ (ಎಡಗಡೆಯವರು) ಜಪ್ತಿ ಮಾಡಿದರು. ಮುಖ್ಯ ಎಂಜಿನಿಯರ್ ಎಸ್.ಪಿ ರಂಗನಾಥ್ ಮತ್ತು ಪಾಲಿಕೆ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್ ಇದ್ದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಕ್ಕೂರು ವಾರ್ಡ್‌ನ ಬೆಳ್ಳಹಳ್ಳಿ ಕ್ರಾಸ್‌ ಕೆಳಸೇತುವೆ ಬಳಿ ರಸ್ತೆಯಡಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಸಲು ರಂಧ್ರ ಕೊರೆಯುತ್ತಿದ್ದ ಯಂತ್ರ, ಟ್ಯಾಂಕರ್‌ ಹಾಗೂ ಲಾರಿಯನ್ನು ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕತ್ತರಿಸಿ ಕೇಬಲ್‌ ಅಳವಡಿಸಲು ನೀಡಿರುವ ಎಲ್ಲ ಅನುಮತಿ ರದ್ದುಪಡಿಸಿದ್ದೇವೆ. ಯಾರೂ ರಸ್ತೆ ಕತ್ತರಿಸುವಂತಿಲ್ಲ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಇತ್ತೀಚೆಗೆ ಆದೇಶ ಹೊರಡಿಸಿದ್ದರು.

ಆದರೂ ಬೆಳ್ಳಹಳ್ಳಿ ಕ್ರಾಸ್‌ ರಸ್ತೆ ಬಳಿ ಯಾವುದೋ ಕಂಪನಿಯವರು ರಂಧ್ರ ಕೊರೆಯುವ ಎಚ್‌ಡಿಡಿ ಯಂತ್ರ ಬಳಸಿ ನೆಲದಡಿ ಕೇಬಲ್‌ ಅಳವಡಿಸುತ್ತಿದ್ದರು. ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಅವರು ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳುವಾಗ ಶುಕ್ರವಾರ ರಾತ್ರಿ ರಂಧ್ರ ಕೊರೆಯುವುದು ಕಂಡುಬಂದಿತ್ತು. ತಕ್ಷಣವೇ ಅವರು ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ರಂಧ್ರ ಕೊರೆಯುವ ಯಂತ್ರ, ಲಾರಿ ಹಾಗೂ ಟ್ಯಾಂಕರ್‌ ವಶಕ್ಕೆ ಪಡೆಯುವಂತೆ ಸೂಚಿಸಿದ್ದರು.

ADVERTISEMENT

ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್‌, ‘ಇದು ಯಾವ ಕಂಪನಿಗೆ ಸೇರಿದ ಯಂತ್ರ ಎಂದು ಗೊತ್ತಾಗಿಲ್ಲ. ನಮ್ಮ ಅಧಿಕಾರಿಗಳು ಯಂತ್ರವಶಕ್ಕೆ ಪಡೆಯುತ್ತಿದ್ದಂತೆಯೇ ಕೇಬಲ್‌ ಅಳವಡಿಸುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಅನುಮತಿ ಇಲ್ಲದೇ ರಸ್ತೆ ಕತ್ತರಿಸಿದವರಿಗೆ ₹ 25 ಲಕ್ಷ ದಂಡ ವಿಧಿಸಲಿದ್ದೇವೆ’ ಎಂದರು.

‘ಜಪ್ತಿ ಮಾಡಿರುವ ಲಾರಿ,ಟ್ಯಾಂಕರ್‌ ನಮ್ಮ ಕಚೇರಿಯಲ್ಲಿದೆ. ಸಾಗಿಸಲು ಸಾಧ್ಯವಿಲ್ಲದ ಕಾರಣ ಯಂತ್ರ ಸ್ಥಳದಲ್ಲೇ ಇದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕೇಬಲ್‌ ಅಳವಡಿಸುವಾಗ ಸಮೀಪದಲ್ಲೇ ಪೊಲೀಸರ ಹೊಯ್ಸಳ ವಾಹನವೂ ಇತ್ತು. ಅನುಮತಿ ಇಲ್ಲದೇ ಕೇಬಲ್‌ ಅಳವಡಿಸುತ್ತಿದ್ದ ವಿಚಾರ ತಿಳಿಸಿದ ಬಳಿಕವೂ ಅದನ್ನು ಅವರು ತಡೆಯಲಿಲ್ಲ. ಯಂತ್ರ ವಶಕ್ಕೆ ಪಡೆಯಲು ಸೂಚಿಸಿದರೆ, ಅವರು ಜಲಮಂಡಳಿಯ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ವಶಕ್ಕೆ ಪಡೆದಿದ್ದಾರೆ’ ಎಂದು ಮುನೀಂದ್ರ ಕುಮಾರ್‌ ತಿಳಿಸಿದರು. ಕೇಬಲ್‌ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಜಾಗದಲ್ಲೇ ನೆಲದಡಿ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾದ ನೈಸರ್ಗಿಕ ಅನಿಲ ಕೊಳವೆ ಮಾರ್ಗವೂ ಹಾದುಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.