ಬೆಂಗಳೂರು: ‘ಮಲ್ಲು ಸ್ವರಾಜ್ಯಂ ಅವರು ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದರು.ಕಮ್ಯುನಿಸ್ಟ್ ಮಹಿಳಾ ಚಳವಳಿಯ ಬೆನ್ನೆಲುಬಾಗಿದ್ದ ಅವರು ಮಹಿಳಾ ಕಾರ್ಮಿಕರ ವಿಮೋಚನೆಯ ಆದರ್ಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ತಿಳಿಸಿದರು.
ಮಲ್ಲು ಸ್ವರಾಜ್ಯಂ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.
‘ತೆಲಂಗಾಣದ ಸೂರ್ಯಪೇಟ್ನಲ್ಲಿ ಸಣ್ಣ ಜಮೀನುದಾರರ ಕುಟುಂಬದಲ್ಲಿ ಜನಿಸಿದ್ದ ಮಲ್ಲು ಸ್ವರಾಜ್ಯಂ ಅವರು ತಾಯಿಯ ಆಶ್ರಯದಲ್ಲಿ ಬೆಳೆದರು. ಅಣ್ಣನ ಪ್ರಭಾವದಿಂದ ಹದಿಹರೆಯದಲ್ಲೇ ಆಂಧ್ರ ಮಹಿಳಾ ಸಭಾದಲ್ಲಿ ಸಕ್ರಿಯವಾಗಿದ್ದ ಅವರು ಸ್ವಾತಂತ್ರ್ಯ ಚಳವಳಿಯಲ್ಲೂ ತೊಡಗಿಕೊಂಡಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು’ ಎಂದು ಸ್ಮರಿಸಿದರು.
‘ಹೋರಾಟ ಹಾಗೂ ಬದ್ಧತೆಯ ಭಾವವನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು. ಆಂಧ್ರ ಮಹಿಳಾ ಸಂಘವನ್ನೂ ಕಟ್ಟಿ ಬೆಳೆಸಿದ್ದರು. ಚುನಾವಣೆಗೆ ಸ್ಪರ್ಧಿಸಿ ಶಾಸಕಿಯಾಗಿಯೂ ಆಯ್ಕೆಯಾಗಿದ್ದರು’ ಎಂದು ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.