ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ಅವರು ಹಿರಿಯ ನಟಿ ಜಯಂತಿ ಅವರಿಗೆ 'ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ' ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ನಮ್ಮಿಂದ ದೂರವಾಗುತ್ತಿದೆ. ಭಾಷೆ ಉಳಿಸಲು ಸಾಹಿತಿಗಳು ಪಡಿಪಾಟಲು ಬೀಳುತ್ತಿದ್ದಾರೆ. ಆದರೂ ಅನ್ಯ ಭಾಷೆಗಳಿಗೆ ಮಾರುಹೋಗುತ್ತಿರುವುದು ದುರಂತ. ಕನ್ನಡ ಉಳಿಸುವುದು ನಮ್ಮ ಕರ್ತವ್ಯ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಶಿವರಾಜ್ಕುಮಾರ್, ‘ಮಹದಾಯಿ ಹೋರಾಟಕ್ಕೆ ನಾನೊಬ್ಬನೇ ಹೋಗಿದ್ದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದು ಸುಳ್ಳು. ಇಡೀ ಚಿತ್ರರಂಗವೇ ಅಂದು ಬೆಂಬಲ ಕೊಟ್ಟಿತ್ತು. ಕನ್ನಡ ನಾಡಿನ ಒಳಿತಿಗೆ ಮುಂದೆಯೂ ಅದೇ ರೀತಿ ಬೆಂಬಲ ನೀಡುತ್ತೇವೆ’ ಎಂದರು.
ಪರಿಷತ್ ಅಧ್ಯಕ್ಷ ಮನು ಬಳಿಗಾರ್, 'ರಾಜ್ಕುಮಾರ್ ಕನ್ನಡದ ಕಣ್ಮಣಿ. ಆ ಸ್ಥಾನ ತುಂಬಲು ಶಿವಣ್ಣರನ್ನು ಬಿಟ್ಟರೆ ಮತ್ಯಾರಿಂದಲೂ ಸಾಧ್ಯವಿಲ್ಲ. ಇಂದು ಇಂಗ್ಲಿಷ್ ಮಾಧ್ಯಮ ವಿರೋಧಿಸಿ ಎಲ್ಲ ಹೋರಾಡಿದರೂ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲ. ರಾಜ್ಕುಮಾರ್ ಈಗಿದ್ದಿದ್ದರೆ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಬಿಡುತ್ತಿರಲಿಲ್ಲ. ಸರ್ಕಾರವೂ ಅವರ ಮಾತನ್ನು ಮೀರುತ್ತಿರಲಿಲ್ಲ’ ಎಂದು ಹೇಳಿದರು.
ಈ ಪ್ರಶಸ್ತಿಯು ₹ 30 ಸಾವಿರಮೊತ್ತ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.