ಬೆಂಗಳೂರು: ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಪ್ರಶಾಂತ್ ಜತೆಗೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರ ಟೇಕ್ ಆಫ್ ಆಗಿಲ್ಲದಿರುವ ಕುರಿತು ಪ್ರಸ್ತಾಪಿಸಿ,ಮಾತಾಡುವಂತಹ ಕೆಲಸಗಳನ್ನು ಈ ಸರ್ಕಾರ ಮಾಡಿಯೇ ಇಲ್ಲ. ಇನ್ನು ಆರು ತಿಂಗಳ
ಸಮಯ ಕೊಡಿ ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿದ್ದಾರೆ. ಆರು ತಿಂಗಳು ಆದ ಮೇಲೆ ಜನ ಬಡಿಗೆ ತಗೊಂಡು ವಿಪಕ್ಷಕ್ಕೆ ಹೊಡೆಯುತ್ತಾರೆ ಅಂತ ಸಿಎಂ ಹೇಳಿದ್ದಾರೆ. ಆರು ತಿಂಗಳು ಸಮಯ ಕೊಟ್ಟೇ ನೋಡ್ತೀವಿ,ಅದೇನು ಸಾಧನೆ ಮಾಡ್ತಾರೋ ಮಾಡಲಿ’ ಎಂದರು.
ಪ್ರಧಾನಿಗೆ ಆಹ್ವಾನ: ನಿಖಿಲ್ ಮದುವೆ ಸಿದ್ಧತೆ ನಡೆದಿದೆ. ಏಪ್ರಿಲ್ 17ರಂದು ಮದುವೆ ನಡೆಯಲಿದೆ. ಲಗ್ನ ಪತ್ರಿಕೆ ಹಂಚುವುದಕ್ಕೆ ಇನ್ನೂ ಆರಂಭಿಸಿಲ್ಲ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿಸಹಿತ ಎಲ್ಲ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.