ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆಭರಣ ಮಳಿಗೆಯಲ್ಲಿ ಚಿನ್ನ ಕಳವು ಮಾಡಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಜೈಪುರ ನಿವಾಸಿ ನಿತಿನ್ ಸೋನಿ (33) ಬಂಧಿತ.
ಆರೋಪಿಯಿಂದ ₹36 ಲಕ್ಷ ಮೌಲ್ಯದ 243 ಗ್ರಾಂ ಚಿನ್ನಾಭರಣ, 22 ಗ್ರಾಂ ಬೆಳ್ಳಿಯ ಗಟ್ಟಿ ಹಾಗೂ ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ರಾಜಾಜಿನಗರದ ಮೂರನೇ ಬ್ಲಾಕ್ 46ನೇ ಕ್ರಾಸ್ ನಿವಾಸಿ ರಾಜಕುಮಾರ್ ಎಂ. ಜೈನ್ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ರಾಜಕುಮಾರ್ ಜೈನ್ ಅವರು ರಾಜಾಜಿನಗರ ಮುಖ್ಯರಸ್ತೆಯಲ್ಲಿ ಆಭರಣ ಅಂಗಡಿ ಇಟ್ಟುಕೊಂಡಿದ್ದಾರೆ. ಅದೇ ಅಂಗಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಸೆ.4ರಂದು ಅಂಗಡಿಯಿಂದ 351 ಗ್ರಾಂ ನೆಕ್ಲೆಸ್, ಹರಳುಗಳು, ವಜ್ರದ ಆಭರಣ, 22 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹62 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದ. ನಂತರ, ರಾಜಾಜಿನಗರದ ಇಎಸ್ಐ ಆಸ್ಪತ್ರೆ ಬಳಿಯ ಚಿನ್ನಾಭರಣ ಮಳಿಗೆಯೊಂದರಲ್ಲಿ ಆರೋಪಿ ಕೆಲಸಕ್ಕೆ ಸೇರಿಕೊಂಡಿದ್ದ. ಆರೋಪಿಯಿದ್ದ ಸ್ಥಳದ ಮಾಹಿತಿ ಪಡೆದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.