ADVERTISEMENT

ಉದ್ಯೋಗದ ಆಮಿಷ: ₹40 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 21:40 IST
Last Updated 4 ಆಗಸ್ಟ್ 2024, 21:40 IST
   

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಆಕಾಂಕ್ಷಿಗಳಿಂದ ₹40 ಲಕ್ಷ ಪಡೆದು ವಂಚಿಸಲಾಗಿದೆ.

ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 50 ವರ್ಷದ ವ್ಯಕ್ತಿಯೊಬ್ಬರು ತಮಿಳುನಾಡಿನ ನೆಲ್ಲಿಕುಪ್ಪಂನಲ್ಲಿ ಎಲ್‌ಐಸಿ ಉದ್ಯೋಗಿಯಾಗಿರುವ ಷಣ್ಮುಗಂರಾಜ್‌, ವೈಷ್ಣವಿ ಹಾಗೂ ರಾಜೇಶ್‌ ಚಿಟ್ಟಿ ಎಂಬುವವರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

‘ಆರೋಪಿ ಷಣ್ಮುಗರಾಜ್‌ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದ. ‘2021ರಲ್ಲಿ ಎಲ್‌ಐಸಿ ಕಚೇರಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ನನಗೆ ಹಣ ಕೊಟ್ಟರೆ ಎಲ್‌ಐಸಿ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇನೆ’ ಎಂದು ತಿಳಿಸಿದ್ದ. ಇದನ್ನು ನಂಬಿದ್ದ ದೂರುದಾರರು ಹಂತ–ಹಂತವಾಗಿ ₹40 ಲಕ್ಷ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ದೂರುದಾರರ ಹೆಂಡತಿ ಹಾಗೂ ಮಾವನ ಮಗಳು ಸೇರಿದಂತೆ ಒಟ್ಟು ಏಳು ಜನರಿಗೆ  ಉದ್ಯೋಗ ಕೊಡಿಸುವ ಮಾತುಕತೆ ಆಗಿತ್ತು. ‘ನನ್ನ ಸ್ನೇಹಿತನ ಮೂಲಕ ಒಟ್ಟು ₹18 ಲಕ್ಷ ಹಣವನ್ನು ಷಣ್ಮುಗರಾಜ್‌ಗೆ ನೀಡಿದ್ದೆವು. ನಂತರ ಫೋನ್‌ ಪೇ–, ಗೂಗಲ್‌ ಪೇ ಮೂಲಕ ಆರೋಪಿಯ ಬ್ಯಾಂಕ್‌ ಖಾತೆಗೆ ಹಂತ–ಹಂತವಾಗಿ ಒಟ್ಟು ₹40 ಲಕ್ಷ ಹಣ ಸಂದಾಯ ಮಾಡಲಾಗಿತ್ತು’ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.

‘ಹಣ ಪಡೆದ ನಂತರ ಷಣ್ಮುಗರಾಜ್‌ ಹಲವರ ಮೊಬೈಲ್‌ ಸಂಖ್ಯೆಗಳಿಗೆ ವಾಟ್ಸ್‌ ಆ್ಯಪ್‌ ಮೂಲಕ ನೇಮಕಾತಿ ಪತ್ರಗಳನ್ನು ಕಳುಹಿಸಿದ್ದ. ಆದರೆ, ಆ ನೇಮಕಾತಿ ಪತ್ರಗಳು ನಕಲಿ ಎಂಬುದು ನಂತರ ಗೊತ್ತಾಗಿದೆ. ಆರೋಪಿ ಕೆಲಸ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.