ADVERTISEMENT

ಗೊತ್ತು ಗುರಿ ಇಲ್ಲದ ಕೇಂದ್ರದ ನೀತಿಗಳು: ಕಣ್ಣನ್ ಗೋಪಿನಾಥನ್

ಮಾಜಿ ಐಎಎಸ್ ಅಧಿಕಾರಿ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:59 IST
Last Updated 1 ಡಿಸೆಂಬರ್ 2019, 19:59 IST
ಕಣ್ಣನ್ ಗೋಪಿನಾಥನ್ ಮಾತನಾಡಿದರು. ಸಸಿಕಾಂತ ಸೆಂಥಿಲ್‌ ಇದ್ದರು
ಕಣ್ಣನ್ ಗೋಪಿನಾಥನ್ ಮಾತನಾಡಿದರು. ಸಸಿಕಾಂತ ಸೆಂಥಿಲ್‌ ಇದ್ದರು   

ಬೆಂಗಳೂರು: ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ), ನಾಗರಿಕತೆ ತಿದ್ದುಪಡಿ ಮಸೂದೆ, ಕಾಶ್ಮೀರದಲ್ಲಿ 370 ವಿಧಿ ರದ್ದು, ನೋಟು ರದ್ದತಿಯಂತಹ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಗೊತ್ತು ಗುರಿ ಏನೂ ಇಲ್ಲ. ಇದು ಕಾರಿನ ಹಿಂದೆ ನಾಯಿಯೊಂದು ಓಡಿದಂತೆ’ ಎಂದು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಟೀಕಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕಾರಿನ ಹಿಂದೆ ಓಡುವ ನಾಯಿಗೆ ನಾನೇಕೆ ಓಡಿಬಂದೆ ಎಂಬುದೇ ಗೊತ್ತಿರುವುದಿಲ್ಲ. ಕೇಂದ್ರ ಸರ್ಕಾರ ಕೂಡ ಅದೇ ರೀತಿಯಲ್ಲಿ ಗುರಿಯೇ ಇಲ್ಲದ ನಿರ್ಧಾರಗಳನ್ನು ಕೈಗೊಂಡು ಅದರ ಹಿಂದೆ ಓಡುತ್ತಿದೆ’ ಎಂದರು.

‘ಕಪ್ಪುಹಣ ಹೊರ ತೆಗೆಯಲು ನೋಟು ರದ್ದತಿ ಮಾಡಲಾಗಿದೆ ಎಂದು ಹೇಳಿದರು. ಬಡವರು ಮನೆಯಲ್ಲಿ ಕೂಡಿಟ್ಟಿದ್ದ ಪುಡಿಗಾಸು ಬ್ಯಾಂಕ್‌ಗೆ ಬಂತೇ ಹೊರತು ಧನಿಕರ ಕಪ್ಪುಹಣ ಹೊರಗೆ ಬರಲೇ ಇಲ್ಲ. ಕಾಶ್ಮೀರಕ್ಕೆ ಇದ್ದ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಲಾಯಿತು. ಮುಂದೇನು ಮಾಡಬೇಕು ಎಂಬ ಗುರಿಯಿಲ್ಲ. ಎನ್‌ಸಿಆರ್ ಮತ್ತುನಾಗರಿಕತೆ ತಿದ್ದುಪಡಿ ಮಸೂದೆ ಕೂಡ ಅದೇ ರೀತಿಯದ್ದು’ ಎಂದರು.

ADVERTISEMENT

ಅಸ್ಸಾಂನಲ್ಲಿ ಎನ್‌ಸಿಆರ್‌ ಅಭಿಯಾನವನ್ನು 6 ವರ್ಷಗಳ ಕಾಲ ಮಾಡಲಾಯಿತು. ಅದಕ್ಕಾಗಿ ₹1,600 ಕೋಟಿ ಖರ್ಚಾಯಿತು. 50 ಸಾವಿರ ಉದ್ಯೋಗಿಗಳನ್ನು ನಿಯೋಜಿಸಲಾಗಿತ್ತು. ಫಲಿತಾಂಶ ಏನೆಂದರೆ 12 ಲಕ್ಷ ಹಿಂದೂಗಳು ಮತ್ತು 6 ಲಕ್ಷ ಮುಸಲ್ಮಾನರು ದಾಖಲೆಗಳಲ್ಲಿ ಇಲ್ಲದವರು ಎಂಬುದು ಪತ್ತೆಯಾಯಿತು. ಈಗ ದೇಶದಾದ್ಯಂತ ಈ ಕಸರತ್ತು ಮಾಡಿದರೆ ಎಷ್ಟು ಹಣ ಬೇಕು. ಇದರಿಂದ ಪ್ರಯೋಜನವಾದರೂ ಏನು’ ಎಂದು ಪ್ರಶ್ನಿಸಿದರು.

ಫ್ಯಾಸಿಸಂ ಹಾದಿ: ‘ಈಗ ಆಡಳಿತದಲ್ಲಿ ಇರುವವರು ಅಧಿಕಾರದಲ್ಲಿ ಮುಂದುವರಿಯಲು ಫ್ಯಾಸಿಸಂ ಹಾದಿ ಹಿಡಿದಿದ್ದಾರೆ’ ಎಂದು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ ಸೆಂಥಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.