ಆನೇಕಲ್: ‘ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯೋಧರ ಧೈರ್ಯ, ಸಾಹಸ, ದೇಶಪ್ರೇಮ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ’ ಎಂದು ನಿವೃತ್ತ ಯೋಧ ನಾಗರಾಜ್ ತಿಳಿಸಿದರು.
ಅವರು ಪಟ್ಟಣದ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು.
ದೇಶದ ಗಡಿಯಲ್ಲಿ ಸೈನಿಕರು ಹವಾಮಾನ ವೈಪರೀತ್ಯಗಳ ನಡುವೆಯೂ ಗಡಿ ಕಾಯುವ ಮೂಲಕ ದೇಶಕ್ಕೆ ರಕ್ಷಣೆ ನೀಡುತ್ತಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶಸೇವೆ ಮಾಡುತ್ತಿರುವುದರಿಂದ ನಾವು ನೆಮ್ಮದಿಯಾಗಿದ್ದೇವೆ. ದೇಶದ ಶಾಂತಿ ಮತ್ತು ರಕ್ಷಣೆಗೆ ಸೈನಿಕರೇ ಕಾರಣಕರ್ತರು. ಹಾಗಾಗಿ ಸೈನಿಕರ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ಭರತ್ ಮಾತನಾಡಿ, ‘ದೇಶ ಕಾಯುವ ಯೋಧರನ್ನು ನಮ್ಮ ಮಾದರಿಗಳನ್ನಾಗಿ ಮಾಡಿಕೊಂಡು ಅವರೇ ನಮ್ಮ ಹೀರೊ ಎಂಬ ಅಭಿಮಾನವನ್ನು ಯುವಕರು ಬೆಳೆಸಿಕೊಳ್ಳಬೇಕು ' ಎಂದರು.
ನಿವೃತ್ತ ಸೈನಿಕ ವೇಣು, ವಿಜ್ಞಾನಿನ ಸುಕನ್ಯಾ ಮಂಜುನಾಥ್, ರಾಷ್ಟ್ರೀಯ ದೇಹ ದಾನ ಜಾಗೃತಿ ಸಮಿತಿ ಕಾರ್ಯಾಧ್ಯಕ್ಷ ಕೆ.ವಿ.ರಾಮಚಂದ್ರ, ವಿಧಾತ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ವಿಧಾತ್, ಪ್ರಾಚಾರ್ಯೆ ಕನಕಾ, ವಸ್ತ್ರ ಭಾರತ್ ಸಂಸ್ಥೆಯ ಸಂಸ್ಥಾಪಕ ವಿನೋದ್ಕುಮಾರ್, ಮುಖಂಡರಾದ ರೇಣುಕಾ ಗಾಂಧೀ, ಕಿರಣ್, ಶರಣ್ಯ, ಕೇಶವ ಮೂರ್ತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.