ADVERTISEMENT

ಲೋಪ ಎಸಗಿದ ಇನ್‌ಸ್ಪೆಕ್ಟರ್‌ಗೆ ಕೋರ್ಟ್‌ ತಪರಾಕಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:15 IST
Last Updated 19 ಮಾರ್ಚ್ 2019, 19:15 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಅವಹೇಳನಕಾರಿಸಂದೇಶ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಕಾನೂನು ಲೋಪ ಎಸಗಿದ ಚಿತ್ರದುರ್ಗ ಟೌನ್ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ತಪರಾಕಿ ನೀಡಿದೆ.

‘ಮೋದಿ ಅವರನ್ನು ಗುಂಡು ಹಾರಿಸಿ ಅಥವಾ ಬಾಂಬ್ ಸ್ಫೋಟಿಸಿ ಕೊಲೆ ಮಾಡಿದರೆ ಸ್ಮಾರಕ ನಿರ್ಮಿಸಬಹುದು. ಅದಕ್ಕೆ ಅವಸರ ಏನಿಲ್ಲ’ ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದ. ಆತನ ವಿರುದ್ಧ 2019ರ ಫೆ. 27ರಂದು ಚಿತ್ರದುರ್ಗ ಟೌನ್ ಇನ್‌ಸ್ಪೆಕ್ಟರ್ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದರು.

ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿ ರತೀಶ್ ಜಾನ್ಸನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ. ಮಂಗಳವಾರ ವಿಚಾರಣೆ ನಡೆಯಿತು.

ADVERTISEMENT

ಅರ್ಜಿದಾರನ ಪರ ವಕೀಲರು ವಾದ ಮಂಡಿಸಿ, ಜಾನ್ಸನ್‌ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 501 (1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅದು ಸಂಜ್ಞೇಯ ಅಪರಾಧ ಕೃತ್ಯವಾಗಿದೆ (ನಾನ್ ಕಾಗ್ನಿಜಬಲ್ ಅಫೆನ್ಸ್). ಇಂಥ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ನೇರವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಆ ಮೂಲಕ, ಇನ್‌ಸ್ಪೆಕ್ಟರ್‌ ಲೋಪ ಎಸಗಿದ್ದು, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, ಇನ್‌ಸ್ಪೆಕ್ಟರ್ ವಿರುದ್ಧ ಗರಂ ಆದರು.

‘ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪೂರ್ವಾನುಮತಿ ಪಡೆಯದೆ ಹೇಗೆ ಎಫ್‌ಐಆರ್ ದಾಖಲಿಸಲಾಗಿದೆ ಇನ್‌ಸ್ಪೆಕ್ಟರ್‌ಗೆ ಕಾನೂನು ಜ್ಞಾನ ಇಲ್ಲವೇ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.

ಇನ್ಸ್‌ಪೆಕ್ಟರ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ ಎಂದು ನ್ಯಾಯಮೂರ್ತಿಗಳು ಕಟು ಎಚ್ಚರಿಕೆ ನೀಡಿದರು. ಈ ಮಧ್ಯೆ, ಸರ್ಕಾರಿ ವಕೀಲ ರಾಚಯ್ಯ ಅವರು, ನ್ಯಾಯಾಲಯ ಅನುಮತಿ ನೀಡಿದರೆ ಕಾನೂನು ಪ್ರಕಾರ ಖಾಸಗಿ ದೂರು ದಾಖಲಿಸಲಾಗುವುದು ಎಂದರು.

ನಂತರ ಅರ್ಜಿ ವಿಚಾರಣೆಯನ್ನು ಮಾ. 23ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ಪ್ರಕರಣದಲ್ಲಿ ಮುಂದಿನ ಕ್ರಮ ಜರುಗಿಸಬಾರದು ಎಂದು ಸೂಚಿಸಿ ಮಧ್ಯಂತರ ಆದೇಶ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.