ಬೆಂಗಳೂರು: ‘ಕಾಶ್ಮೀರ ಎಂದರೆ ಈ ದೇಶದ ಜ್ಞಾನದ ತವರು. ಅದನ್ನು ನಾಶ ಮಾಡುವ ಸಲುವಾಗಿಯೇ ಅಲ್ಲಿ ಹಿಂದೂಗಳ ಮಾರಣ ಹೋಮ ನಡೆಯಿತು’ ಎಂದು ಕಾಶ್ಮೀರ ಹಿಂದೂ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಆರ್.ಕೆ.ಮಟ್ಟು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಾಭಾ ಯುವ ಘಟಕ ಆಯೋಜಿಸಿದ್ದ ‘ಕಾಶ್ಮೀರ ನರಮೇಧದ ಕುರಿತ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂಗಳು ಎಚ್ಚೆತ್ತುಕೊಳ್ಳಲು ಇದು ಸಕಾಲ. ಈಗಲೂ ಅದು ಆಗದಿದ್ದರೆ ನಮ್ಮ ಅಸ್ತಿತ್ವವೇ ನಾಶವಾಗಲಿದೆ’ ಎಂದು ಅಭಿಪ್ರಾಯಟಪ್ಟರು.
‘ಕಾಶ್ಮೀರದಲ್ಲಿ ಹಿಂದೂಗಳ ಮೇಲೆ 1990ರಲ್ಲಿ ಏಕಾಏಕಿ ದಾಳಿ ನಡೆಯಲಿಲ್ಲ. ಹಲವು ವರ್ಷಗಳಿಂದ ಮಾರಣಹೋಮ ನಡೆದುಕೋಂಡೇ ಬಂದಿದೆ. ಅದರ ಪರಿಣಾಮವಾಗಿಯೇ, ಅಲ್ಲಿ ಶೇ 12ರಷ್ಟಿದ್ದ ಪಂಡಿತ ಸಮುದಾಯದ ಜನಸಂಖ್ಯೆ ಶೇ 2ಕ್ಕೆ ಇಳಿಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಲ್ಲಿ ಹಿಂದೂಗಳು ಉಸಿರಾಡಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ‘ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಿಸುವಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಎರಡೂ ವಿಫಲವಾಗಿವೆ. ‘ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆಯಾದ ಬಳಿಕ ಸುಪ್ರೀಂ ಕೋರ್ಟ್ಗೆ ಮತ್ತೊಮ್ಮೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಪಂಡಿತರ ಪರವಾಗಿ ನ್ಯಾಯ ಕೇಳಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತದೋ ಇಲ್ಲವೋ ತಿಳಿಯದು. ಸರ್ಕಾರವೇ ಆಯೋಗ ನೇಮಿಸಿ ತನಿಖೆ ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದರು.
ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಸಂವಾದ ಉದ್ಘಾಟಿಸಿದರು. ನಟಿ ಮಾಳವಿಕ ಅವಿನಾಶ್ ಸಂವಾದ ನಿರ್ವಹಿಸಿದರು. ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು, ಕಾರ್ತಿಕ್ ಭಟ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.